ಬೆಂಗಳೂರು: ಯಶ್ -ರಾಧಿಕಾ ಪಂಡಿತ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ, ಯಶ್ ಸಿನಿಮಾ ಅಂದರೆ ಹೇಳಬೇಕೆ? ಎಂದಿನಂತೆ ಮಾಸ್ ಡೈಲಾಗ್ ಗಳಿಂದಲೇ ಯಶ್ ಅಬ್ಬರಿಸಿದ್ದು, ಚಿತ್ರದ ಟ್ರೈಲರ್ ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ.
'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ಟೀಸರ್, ಟ್ರೈಲರ್ ಬಿಡುಗಡೆಯಾಗಿ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆ ಮುಂದೆ ಬರಲು ಸಿದ್ಧವಾಗಿರುವಾಗ, ಚಿತ್ರದಲ್ಲಿ ಬಳಸಿದ ಡೈಲಾಗ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕಿಚಾಯಿಸಿದ್ದು ಸದ್ಯದ ಸುದ್ದಿ!
ಅದೇನಪ್ಪಾ ಅಂದ್ರೆ, ಎರಡು ದಿನಗಳ ಹಿಂದೆ ಉಪೇಂದ್ರ ಅವರು ಕಿಚ್ಚ ಸುದೀಪ್ಗೆ ಟ್ವಿಟರ್ನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ಉಪ್ಪಿ ಪ್ರಶ್ನೆ ಹೀಗಿತ್ತು: ಸುದೀಪ್ ಕ್ವೆಶ್ಚನ್ ನಂಬರ್ 1. ನಾವಿಬ್ರೂ ಸೇರಿ ಒಂದು ಫಿಲ್ಮ್ ಮಾಡಿದ್ವಿ, ಅದರಲ್ಲಿ ಒಬ್ರು ಬ್ಯಾಟ್, ಒಬ್ರು ವಿಕೆಟ್ ಅಂತ ಎಲ್ಲೊ ಒಂದ್ಕಡೆಯಿಂದ ಕೇಳ್ಪಟ್ಟೆ, ನಮ್ಮಿಬ್ಬರ ಮಧ್ಯೆ ಬ್ಯಾಟ್ ಯಾರು? ವಿಕೆಟ್ ಯಾರು? ಆನ್ಸರ್ ಮಾಡಿ..ಓಕೆ
ಉಪ್ಪಿಯ ಈ ಪ್ರಶ್ನೆಗೆ ನಗುತ್ತಲೇ ವಿಡಿಯೊ ಸಂದೇಶದ ಮೂಲಕ ಉತ್ತರ ಕೊಟ್ಟ ಸುದೀಪ್, ಉಪ್ಪಿ ಸರ್, ಕ್ರಿಕೆಟ್ನಲ್ಲಿ ಬಾಲ್ ತುಂಬಾ ಮುಖ್ಯ. ಬಾಲ್ ಯಾರು ಅಂತ ಹೇಳಿ, ಆವಾಗ ವಿಕೆಟ್ ಯಾರು? ಬ್ಯಾಟ್ ಯಾರು ಅಂಥ ನಾನೇ ಹೇಳ್ತಿನಿ ಎಂದಿದ್ದಾರೆ.
ಇದಕ್ಕೆ ಉತ್ತರವಾಗಿ ಉಪ್ಪಿ, ಸುದೀಪ್ ಆ ಬಾಲ್ ಯಾರು ಅಂತ ನೀವು ಕೇಳ್ತಾ ಇದ್ದೀರಾ, ಮೊದಲು ಆ ಬಾಲ್ ಹಾರ್ಡ್ ಬಾಲಾ, ಟೆನಿಸ್ ಬಾಲಾ, ಲೆದರ್ ಬಾಲಾ ಇಲ್ಲಾ ಬ್ಲೋ ಆಗಿರ ಟುಸ್ ಬಾಲಾ ಅಂತ ಹೇಳಿ, ಆಮೇಲೆ ಆ ಬಾಲ್ ಯಾರು ಅಂತ ಹೇಳ್ತೀನಿ, ನೌ ದ ಬಾಲ್ ಈಸ್ ಇನ್ ಯುವರ್ ಕೋರ್ಟ್ ಎಂದು ಮರು ಪ್ರಶ್ನೆ ಎಸೆದಿದ್ದಾರೆ.
'ಮುಕುಂದ ಮುರಾರಿ' ಸಿನಿಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ನಡುವೆ ನಡೆದ ಸಂಭಾಷಣೆಗಳು 'ಎಲ್ಲೋ ಒಂದ್ಕಡೆ' ಯಶ್ಗೆ ಟಾಂಗ್ ಕೊಟ್ಟಂತೆ ಇದೆ ಎಂಬುದು ಈಗ ಸಾಮಾಜಿಕ ತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಅಂದ ಹಾಗೆ ಉಪ್ಪಿ -ಕಿಚ್ಚ ನಡುವಿನ ಈ ಸಂಭಾಷಣೆಗೆ ಕಾರಣವಾದ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಆ ಡೈಲಾಗ್ ಯಾವುದು ಗೊತ್ತಾ?
''ತಲ್ವಾರ್ ಹಿಡ್ಕೊಂಡು ತಲೆ ತೆಗಿತೀನಿ ಅಂದೋರ್ ಬಗ್ಗೇನೇ ತಲೆ ಕೆಡಿಸ್ಕೊಂಡಿಲ್ಲ, ಇನ್ ನೀವ್ ಏನ್ರೋ ಚಿಕ್ ಮಕ್ಕಳ್ ತರ ವಿಕೆಟ್ ಬ್ಯಾಟ್ ಹಿಡ್ಕೊಂಡು ಬಂದಿದ್ದೀರಾ?''
ಯಶ್ ಸಿನಿಮಾದ ಈ ಒಂದೇ ಒಂದು ಡೈಲಾಗ್ ಬಗ್ಗೆ ಉಪ್ಪಿ ಮತ್ತು ಸುದೀಪ್ ಪ್ರತಿಕ್ರಯಿಸಿರುವ ರೀತಿ ಬಾಲಿಶವಾಗಿದೆ ಎಂದು ಒಂದಷ್ಟು ಅಭಿಮಾನಿಗಳು ಹೇಳಿದರೆ, ಇನ್ನು ಕೆಲವರು ಯಶ್ ಹವಾ ಹಂಗಿದೆ ಎಂದು ಸಾಮಾಜಿಕ ತಾಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
U wil get my reply soon @nimmaupendra https://t.co/4WggGmkR4g
— Kichcha Sudeepa (@KicchaSudeep) October 23, 2016
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.