ಕರ್ನಾಟಕ ಸಂಗೀತದಲ್ಲಿ ಜನಕ ರಾಗಗಳ ಸಂಖ್ಯೆ 72. ಆದರೆ ಅವುಗಳಲ್ಲಿ ಚಾಲ್ತಿಯಲ್ಲಿರುವ ರಾಗಗಳು ಕೆಲವು ಮಾತ್ರ. ಹೀಗೆ ಜನಗಳನ್ನು ತಲುಪದ ಅಪರೂಪ ರಾಗಗಳನ್ನೂ ಚಾಲ್ತಿಗೆ ತರುವ ಕೈಂಕರ್ಯವನ್ನು ಈ ಹಿಂದೆ ಕೆಲವರು ಮಾಡಿದ್ದರೂ ಅನೇಕ ರಾಗಗಳು ಈಗಲೂ ಕೇಳುಗರಿಂದ ದೂರವೇ ಉಳಿದಿದೆ.
ಈ ರಾಗಗಳನ್ನು ಸಹೃದಯರಿಗೆ ತಲುಪಿಸುವ ಛಲ ಹೊತ್ತ ಆರ್.ಕೆ. ಪದ್ಮನಾಭ ಅವರು 72 ರಾಗಗಳಲ್ಲೂ ವರ್ಣ ಮಟ್ಟು ಹಾಕಿ, ರಾಗಗಳ ಸ್ವರೂಪವನ್ನು ಸಹೃದಯರಿಗೆ ಮುಟ್ಟಿಸುವ ಸಂಕಲ್ಪ ಮಾಡಿದರು. ಅಪರೂಪವೂ, ಕ್ಲಿಷ್ಟವೂ ಆದ ರಾಗಗಳಲ್ಲಿ ಭಾವ ಹೊಮ್ಮುವಂತೆ ಮಾಧುರ್ಯವಾಗಿ ಸಂಯೋಜನೆ ಮಾಡಿದ್ದಾರೆ.
ತೋಡಿ, ಕಲ್ಯಾಣಿ, ಶಂಕರಾಭರಣಗಳಂಥ ಘನರಾಗಗಳಲ್ಲದೆ ಚಾರುಕೇಶಿ, ಧೇನುಕ, ಕೀರವಾಣಿಗಳಂಥ ರಕ್ತಿ ರಾಗಗಳಲ್ಲೂ ಸಂಯೋಜಿಸಿದ್ದಾರೆ. ಅಲ್ಲದೆ ರತ್ನಾಂಗಿ, ತಾನರೂಪಿ, ರೂಪವತಿ, ವರುಣಪ್ರಿಯ, ಕೋಸಲ - ಮುಂತಾದ ಅಪರೂಪ ರಾಗಗಳಲ್ಲೂ ಸಂಯೋಜಿಸಿರುವುದು ಪದ್ಮನಾಭ ಅವರ ಪ್ರತಿಭೆ, ಶ್ರದ್ಧೆ, ಅನುಭವಗಳಿಗೆ ಹಿಡಿದ ಕೈಗನ್ನಡಿ.
ರಾಗ ಸಂಯೋಜನೆಯ ಈ ಬೃಹತ್ ಕಾರ್ಯಕ್ಕೆ ಪದ್ಮನಾಭ ಆರಿಸಿಕೊಂಡಿರುವುದು ಪುರಂದರ ದಾಸರ ಪದಗಳನ್ನು. ‘ದಾಸರೆಂದರೆ ಪುರಂದರ ದಾಸರಯ್ಯ’ ಎಂದು ತಮ್ಮ ಗುರುಗಳಿಂದಲೇ ಶ್ಲಾಘನೆ ಪಡೆದ ಪುರಂದರದಾಸರು ‘ಕರ್ನಾಟಕ ಸಂಗೀತ ಪಿತಾಮಹ’ಎಂದೇ ಎಲ್ಲ ಕಡೆ ಮಾನಿತರು.
ಅವರು ಶ್ರೇಷ್ಠ ಹರಿದಾಸರಾಗಿದ್ದರಲ್ಲದೆ ಗಣ್ಯ ಸಮಾಜ ಸುಧಾರಕರೂ ಹೌದು. ತಿಳಿಯಾದರೂ ಸ್ವಾರಸ್ಯಕರ ಭಾಷೆ. ಸೊಗಡುಳ್ಳ ಆಡು ಮಾತಿನ ಭಾಷೆ. ಆಹ್ಲಾದಕರ ಉಪಮೇಯಗಳು. ಸಾಧಕನ ಒಳತೋಟಿ ಕೆಣಕಿದಂತೆ, ಅನುಭಾವಿಗಳ ಅಂತರಂಗ ತೆರೆದಿದ್ದಂತೆ ಪುರಂದರದಾಸರ ಪದಗಳು ಗಾಢ ಅನುಭವ ನೀಡಬಲ್ಲವು.
ಕೆಟ್ಟು ನೆಂಟರ ಸೇರುವುದು, ದುಗ್ಗಾಣಿ ಬಲು ಕೆಟ್ಟದಣ್ಣ, ಪಾಪಿ ಬಲ್ಲನೆ ಪರರ ಸುಖದುಃಖವ, ಇಬ್ಬರು ಹೆಂಡಿರ ಸುಖವ ಇಂದು ಕಂಡೆನಯ್ಯ... ಸೇರಿದಂತೆ ಹಲವಾರು ಸ್ವಾರಸ್ಯಕರ, ಅರ್ಥಪೂರ್ಣ ಪದಗಳನ್ನು ಹೆಕ್ಕಿ ತೆಗೆದು, ಸಾಹಿತ್ಯ ಭಾವಕ್ಕೆ ಹೊಂದುವ ಸಂಗೀತ ಸಂಯೋಜಿಸಿದ್ದಾರೆ ಆರ್.ಕೆ.ಪಿ. ಅಷ್ಟೇ ಅಲ್ಲ. ಇಲ್ಲಿ ಇನ್ನೊಂದು ಅಮೂಲ್ಯ ವಿಷಯವೂ ಇದೆ. ಈ ಮೂಲಕ ಕನ್ನಡದ ರಚನೆಗಳು ಸಂಗೀತ ಕಛೇರಿಗಳನ್ನು ಆವರಿಸುವ ಸಾಧ್ಯತೆಗಳು ಹೆಚ್ಚಿವೆ. ಹರಿದಾಸರ ಪದಗಳು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕೇಳುವ ಅವಕಾಶ ಹೇರಳವಾಗುತ್ತದೆ.
ಈ ಕೈಂಕರ್ಯ ಮಾಡುತ್ತಿರುವ ಆರ್.ಕೆ.ಪದ್ಮನಾಭ ರಾಜ್ಯದ ಜನಪ್ರಿಯ ಗಾಯಕರಲ್ಲಿ ಒಬ್ಬರು. ಉತ್ತಮ ಕಂಠ, ಲವಲವಿಕೆಯ ನಿರೂಪಣೆ, ಕೆಲವೆಡೆ ಅರ್ಥಪೂರ್ಣ ವಿವರಣೆ. ಪಕ್ಕವಾದ್ಯಗಳನ್ನು ಹುರಿದುಂಬಿಸುತ್ತಾ-ಮೇಳೈಸುತ್ತಾ ಶ್ರೋತೃಗಳ ಸಂತೋಷಕ್ಕೆ ಕಾರಣಕರ್ತರಾಗುತ್ತಾರೆ.
ಅವರ ಶಿಷ್ಯರಲ್ಲಿ ಅನೇಕರು ಇಂದು ವೇದಿಕೆಯಲ್ಲಿ ಬೆಳಗುತ್ತಿರುವುದು, ಅವರ ದಕ್ಷ ಶಿಕ್ಷಣ ಸಾಮರ್ಥ್ಯಕ್ಕೆ ಸಾಕ್ಷಿ. ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷರಾಗಿ, ಸಂಸ್ಥೆಗೆ ಆರ್ಥಿಕ ಬಲ ತುಂಬುತ್ತಾ, ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ರಂಗದ ಮೇಲೆ ಪುರಂದರದಾಸರಾಗಿ ಅವರು ನೀಡಿದ ಅಭಿನಯ ಸ್ಮರಣೀಯ. ‘ಪದ್ಮನಾಭದಾಸ’ ಅಂಕಿತದಿಂದ ಅವರು ರಚಿಸಿರುವ ರಚನೆಗಳು ಪುಸ್ತಕ ಹಾಗೂ ಸಿ.ಡಿ. ರೂಪಗಳಲ್ಲೂ ಹೊರಬಂದಿವೆ.
ಕಳೆದ ಒಂದು ವರ್ಷದಿಂದ ತಿಂಗಳಿಗೆ ಆರು ರಾಗಗಳ ಒಂದು ಚಕ್ರದಂತೆ ‘ಪುರಂದರ ಮೇಳ ಮಾಲಾ’ವನ್ನು ಸಾದರ ಪಡಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮ ಮಾಲೆ ನಡೆಯುತ್ತಿರುವ ‘ಪುರಂದರ’ ಮಂಟಪವು ಸಂಗೀತ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸುತ್ತಿರುವ ಗಣ್ಯ ಸಂಸ್ಥೆ.
ಇಲ್ಲಿರುವ ಪುರಂದರದಾಸರ ಮಾರ್ಬಲ್ ಪ್ರತಿಮೆ ಬಹು ಸುಂದರ, ಆಕರ್ಷಕ. ಸುಮಾರು 200 ಆಸನಗಳುಳ್ಳ ಸಭಾಂಗಣ ದಾಸರ ಚಿತ್ರಗಳಿಂದ ಅಲಂಕೃತವಾಗಿ ದೈವೀಕ ವಾತಾವರಣವಿದ್ದು, ಕಲಾವಿದರಿಗೆ ಸ್ಫೂರ್ತಿದಾಯಕವಾಗಿದೆ.
ಗ್ರಂಥಾಲಯ, ಸಿ.ಡಿ. ಸಂಗ್ರಹಾಲಯ, ದಾಸರ ಕೃತಿಗಳ ಉಚಿತ ಸಂಗೀತ ಶಾಲೆ, ಪ್ರತಿ ವರ್ಷ ದಾಸರ ಆರಾಧನೆಯ ಆಚರಣೆ ಮುಂತಾದ ಕಾರ್ಯಕ್ರಮಗಳನ್ನು ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟ್ ಹೊಂದಿದೆ. ಈ ಎಲ್ಲ ಕಾರ್ಯಕ್ರಮಗಳು ಎಸ್. ವರದರಾಜನ್ ಅವರ ಕನಸಿನ ಕೂಸು.
ಹೀಗೆ ಗಾಯಕ, ಬೋಧಕ, ವಾಗ್ಗೇಯಕಾರ, ನಟ, ವ್ಯವಸ್ಥಾಪಕರಾಗಿ ವಿವಿಧ ಸೇವೆ ಸಲ್ಲಿಸುತ್ತಿರುವ ಆರ್.ಕೆ.ಪದ್ಮನಾಭ ಅವರನ್ನು ಭಾನುವಾರದಂದು (ನ.13) ನಾರಾಯಣ ರಾಮಾನುಜ ಅವರು ಸನ್ಮಾನಿಸಲಿದ್ದಾರೆ.
ಪುರಂದರ ಮೇಳ ಗಾನ ಮಹೋತ್ಸವ
ಪುರಂದರದಾಸರ ಮೇಳ ರಾಗ ಕೃತಿಗಳ ಕುರಿತು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಅವರು ಕಳೆದೊಂದು ವರ್ಷದಿಂದ ಪ್ರತಿ ತಿಂಗಳು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸರಣಿಯ ಸಮಾರೋಪ; ಪುರಂದರದಾಸರ 72 ಮೇಳಕರ್ತ ರಾಗಗಳ ಕುರಿತು ಕೃತಿ ಹಾಗೂ ಸೀಡಿ ಹೊರತಂದಿರುವ ಪದ್ಮನಾಭ ಅವರಿಗೆ ಸನ್ಮಾನ.
ಉಪಸ್ಥಿತಿ– ಯದುಗಿರಿ ಯತಿರಾಜ ಮಠದ ಜೀಯಾರ್ ಸ್ವಾಮೀಜಿ. ಆಯೋಜನೆ/ ಸ್ಥಳ– ಶ್ರೀ ಪುರಂದರ ದಾಸ ಸ್ಮಾರಕ ಟ್ರಸ್ಟ್ನ ಮಂಟಪ, #28/ಎ, ಮೂರನೇ ಮುಖ್ಯರಸ್ತೆ, ಕಲ್ಯಾಣನಗರ, ಇಸ್ರೊ ಲೇಔಟ್ ಬಳಿ. ಭಾನುವಾರ ಬೆಳಿಗ್ಗೆ 10.30.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.