ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ರಿಯಾಲಿಟಿ ಷೋ ಸ್ಪರ್ಧಿ ಪ್ರಥಮ್ ಮೇಲೆ, ನಟ ಹಾಗೂ ನಿರ್ದೇಶಕ ಹುಚ್ಚ ವೆಂಕಟ್ ಹಲ್ಲೆ ನಡೆಸಿರುವುದನ್ನು ನಿರೂಪಕ ಸುದೀಪ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಘಟನೆಗೆ ಸಂಬಂಧಿಸಿದಂತೆ ನ್ಯಾಯ ಸಿಕ್ಕರೆ ಮಾತ್ರ ಷೋನ ನಿರೂಪಣೆ ಮುಂದುವರಿಸುತ್ತೇನೆ. ಇದು ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ನಾನು ನೀಡುವ ಭರವಸೆ’ ಎಂದು ಹೇಳಿದ್ದಾರೆ.
‘ಈಗಷ್ಟೇ ಬಿಗ್ ಬಾಸ್ ಸಂಚಿಕೆ ವೀಕ್ಷಿಸಿದೆ. ಹುಚ್ಚ ವೆಂಕಟ್ ವರ್ತನೆ ಅಕ್ಷಮ್ಯವಾದದು. ಈ ಸಂಬಂಧ ಏನು ಮಾಡಬೇಕೊ ಅದರ ಪರವಾಗಿ ನಾನು ನಿಲ್ಲುತ್ತೇನೆ. ವೆಂಕಟ್ ಯಾವಾಗ ಬೇಕಾದರೂ ಬಿಗ್ ಬಾಸ್ ಮನೆಗೆ ಬಂದು, ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿ ಹೋಗುವುದು ಸರಿಯಲ್ಲ. ಅವರಿಗೆ ಶಿಕ್ಷೆಯಾಗಬೇಕು’ ಎಂದೂ ಸುದೀಪ್ ಅವರು ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
ಚಿಕಿತ್ಸೆಯ ಅಗತ್ಯವಿದೆ: ಸುದೀಪ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಅದು ಹುಚ್ಚ ವೆಂಕಟ್ ತಪ್ಪಲ್ಲ. ಕೆಳಮಟ್ಟದ ಪ್ರಚಾರಕ್ಕಾಗಿ ಕೆಲವರು ಹೀಗೆ ಪ್ರಚೋದಿಸುತ್ತಿದ್ದಾರೆ. ಆತನಿಗೆ ಮಾರ್ಗದರ್ಶನ, ಅನುಕಂಪದ ಜತೆಗೆ ಚಿಕಿತ್ಸೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ.
ಘಟನೆ ಕುರಿತು, ಷೋನ ನಿರ್ದೇಶಕರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೆ, ಸುದೀಪ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ನ. 15ರಂದು ಇಬ್ಬರು ಅಂಗರಕ್ಷಕರೊಂದಿಗೆ ‘ಬಿಗ್ ಬಾಸ್’ ಮನೆಗೆ ಭೇಟಿ ನೀಡಿದ್ದ ವೆಂಕಟ್, ಒಮ್ಮೆಲೆ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದರು.
ಕೂಡಲೇ ಅಂಗರಕ್ಷಕರು ಅವರನ್ನು ಸ್ಥಳದಿಂದ ಕರೆದೊಯ್ದಿದ್ದರು. ಕಳೆದ ಬಾರಿ ಬಿಗ್ ಬಾಸ್ ಸೀಸನ್ –4ರಲ್ಲಿ ಭಾಗವಹಿಸಿದ್ದ ಹುಚ್ಚ ವೆಂಕಟ್, ಸಹ ಸ್ಪರ್ಧಿ ರವಿ ಅವರ ಮೇಲೂ ಹಲ್ಲೆ ನಡೆಸಿ ಹೊರ ಬಂದಿದ್ದರು.