<p><strong>ಬೆಂಗಳೂರು:</strong> ‘ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕೊಳವೆಬಾವಿಗಳು ಮುಂದಿನ 10 ವರ್ಷಗಳಲ್ಲಿ ಬತ್ತಿ ಹೋಗಲಿವೆ. ಕುಡಿಯುವ ನೀರಿಗೆ ಸಮಗ್ರ ಯೋಜನೆ ರೂಪಿಸದಿದ್ದರೆ ಈ ಅವಧಿಯಲ್ಲಿ ನಗರದ ಶೇ 50ರಷ್ಟು ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಬೆಂಗಳೂರು ಸಾಯುತ್ತಿರುವ ಮಹಾನಗರ’ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ವಿಶ್ಲೇಷಿಸಿದರು.<br /> <br /> ‘ವಾಯ್ಸಸ್ ಫ್ರಮ್ ದಿ ವಾಟರ್ಸ್’ ಸಂಘಟನೆಯ ಆಶ್ರಯದಲ್ಲಿ ಜಲದನಿಗಳು ಚಿತ್ರೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬತ್ತಿಹೋಗುತ್ತಿರುವ ನದಿಗಳು ಹಾಗೂ ಕೆರೆಗಳು’ ಸಂವಾದದಲ್ಲಿ ಅವರು ಮಾತನಾಡಿದರು.<br /> <br /> ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ 1.10 ಕೋಟಿ ಜನರು ಇದ್ದಾರೆ. ಶೇ 60ರಷ್ಟು ಮಂದಿ ಈಗಲೂ ಕೊಳವೆಬಾವಿಗಳ ನೀರನ್ನು ಅವಲಂಬಿಸಿದ್ದಾರೆ. ಜನಸಂಖ್ಯೆ ವರ್ಷಕ್ಕೆ ಶೇ 4ರಷ್ಟು ಹೆಚ್ಚಾಗುತ್ತಿದೆ. 29 ಟಿಎಂಸಿ ಅಡಿ ಪೂರೈಕೆಯಾದರೂ ನಗರದ ನೀರಿನ ಬೇಡಿಕೆಯನ್ನು ಈಡೇರಿಸುವುದು ಕಷ್ಟ’ ಎಂದು ಹೇಳಿದರು.<br /> <br /> ಹಳ್ಳಿಗಳೂ ನಗರದ ತೆಕ್ಕೆಯೊಳಗೆ: ‘ಸುತ್ತಮುತ್ತಲಿನ ಹಳ್ಳಿಗಳೆಲ್ಲ ಈಗ ರಾಜಧಾನಿಯ ಹೊಟ್ಟೆಯೊಳಗೆ ಸೇರಿಕೊಂಡಿವೆ. ಬಿಡಿಎ ವ್ಯಾಪ್ತಿ 1,300 ಚ.ಕಿ.ಮೀ. ಇದೆ. ಈಗ ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿ ಬಿಡಿಎ ಗಡಿಯನ್ನು ದಾಟಿ ಇಡೀ ನಗರ ಜಿಲ್ಲೆಯನ್ನು ವ್ಯಾಪಿಸಿದೆ. ಅಂದರೆ ಈಗಿನ ವಿಸ್ತಾರ 2,100 ಚ.ಕಿ.ಮೀ. ಈ ನಡುವೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ತನ್ನೊಳಗೆ ಸೆಳೆದುಕೊಳ್ಳಲು ಆರಂಭಿಸಿದೆ. ಈ ಎಲ್ಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸವಾಲು ಇದೆ’ ಎಂದು ಹೇಳಿದರು.<br /> <br /> <strong>ಮಳೆ ನೀರು ಸಂಗ್ರಹ– ದೊಡ್ಡ ಜೋಕ್: </strong>‘ನಗರದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯ ವಿಷಯ ದೊಡ್ಡ ಜೋಕ್ ಆಗಿದೆ. ನಗರದಲ್ಲಿ 90 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಚೆನ್ನೈಯಲ್ಲಿ 5 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆ ಇದೆ. ಜಲಮಂಡಳಿ ಕಡ್ಡಾಯದ ಗಡುವು ವಿಸ್ತರಿಸುತ್ತಲೇ ಇದೆ. ದಂಡ ವಿಧಿಸುವ ಶಾಸ್ತ್ರ ಮಾಡುತ್ತಲೇ ಇದೆ’ ಎಂದು ವ್ಯಂಗ್ಯವಾಡಿದರು.<br /> <br /> <strong>ಕಾವೇರಿ ನೀರೂ ಶುದ್ಧವಲ್ಲ:</strong> ‘ನಗರದಲ್ಲಿ ಪೂರೈಕೆಯಾಗುವ ಶೇ 49ರಷ್ಟು ನೀರು ಕುಡಿಯಲು ಯೋಗ್ಯವಲ್ಲ. ಕಾವೇರಿ ನೀರಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಹಂತಗಳಲ್ಲಿ ಶುದ್ಧೀಕರಿಸಿ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಪೈಪ್ಲೈನ್ಗಳು ಅಕ್ಕಪಕ್ಕದಲ್ಲೇ ಇವೆ. ಈ ಪೈಪ್ಲೈನ್ಗಳು 50–60 ವರ್ಷಗಳಷ್ಟು ಹಳೆಯವು. ಕಾವೇರಿ ನೀರಿಗೆ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಈ ನೀರು ಕಲುಷಿತಗೊಳ್ಳುತ್ತಿದೆ’ ಎಂದು ಅವರು ತಿಳಿಸಿದರು.<br /> <br /> <strong>ಕೆರೆಗಳ ವ್ಯವಸ್ಥಿತ ನಾಶ</strong>: ‘ನಗರದ ಕೆರೆಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗುತ್ತಿದೆ. ಆರಂಭದಲ್ಲಿ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ಕೆರೆಯ ದಡದಲ್ಲಿ ಸುರಿಯಲಾಗುತ್ತದೆ. ಬಳಿಕ ಪಕ್ಕದಲ್ಲಿ ಗುಡಿಯೊಂದನ್ನು ನಿರ್ಮಾಣ ಮಾಡಲಾಗುತ್ತದೆ. ಸ್ವಲ್ಪ ಸಮಯವಾದ ಬಳಿಕ ಗುಡಿಸಲು ತಲೆ ಎತ್ತುತ್ತದೆ. ವರ್ಷ ಕಳೆಯುವಷ್ಟರಲ್ಲಿ ಬಹುಮಹಡಿ ಕಟ್ಟಡವೊಂದು ನಿರ್ಮಾಣವಾಗುತ್ತದೆ’ ಎಂದು ಹೇಳಿದರು.<br /> <br /> <strong>ಕೋಲಾರದಲ್ಲಿ ದ್ರಾಕ್ಷಿ ಬೆಳೆ ಏಕೆ?</strong><br /> ‘ಕೋಲಾರದಲ್ಲಿ ಈ ಹಿಂದೆ ರಾಗಿ ಬೆಳೆಯಲಾಗುತ್ತಿತ್ತು. ಈಗ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಅಂತರ್ಜಲ ಪಾತಾಳಕ್ಕೆ ಇಳಿಯಲು ಇದೂ ಕಾರಣ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ. ಶ್ರೀನಿವಾಸಯ್ಯ ಹೇಳಿದರು. ‘1 ಕೆ.ಜಿ. ದ್ರಾಕ್ಷಿ ಬೆಳೆಯಲು 800 ಲೀ. ನೀರು ಬೇಕು. 3 ಕೆ.ಜಿ.ಗೆ 2,400 ಲೀ. ನೀರು ಬೇಕು. ಒಂದು ಬಾಟಲಿ ವೈನ್ ತಯಾರಿಸಲು 3 ಕೆ.ಜಿ. ದ್ರಾಕ್ಷಿ ಅಗತ್ಯ. ವೈನ್ಗಾಗಿ ಇಷ್ಟೊಂದು ನೀರು ಹಾಳು ಮಾಡುವ ಅಗತ್ಯ ಇದೆಯಾ’ ಎಂದು ಪ್ರಶ್ನಿಸಿದರು.<br /> <br /> <strong>ಚಳಿಗಾಲದಲ್ಲೇ ಜಲಪಾತಗಳಲ್ಲಿ ನೀರಿಲ್ಲ: ಲಿಯೋ ಸಲ್ಡಾನಾ</strong><br /> ಮಳೆ ಕೊರತೆಯಿಂದಾಗಿ ಕರ್ನಾಟಕ ಹಾಗೂ ಕೇರಳದ ಪಶ್ಚಿಮ ಘಟ್ಟಗಳ ಜಲಪಾತಗಳಲ್ಲಿ ನವೆಂಬರ್ ತಿಂಗಳಲ್ಲೇ ನೀರಿಲ್ಲ’ ಎಂದು ಪರಿಸರ ತಜ್ಞ ಲಿಯೋ ಸಲ್ಡಾನಾ ಹೇಳಿದರು.</p>.<p>‘ನಾನು ಕಳೆದ ವಾರ ಕೊಡಗು ಹಾಗೂ ವಯನಾಡು ಭಾಗದಲ್ಲಿ 800 ಕಿ.ಮೀ. ಸಂಚಾರ ಮಾಡಿದೆ. ಬಹುತೇಕ ಜಲಪಾತಗಳು ಬತ್ತಿ ಹೋಗಿದ್ದವು’ ಎಂದು ಅವರು ತಿಳಿಸಿದರು.<br /> <br /> ‘ರಾಜ್ಯದ ಅರಣ್ಯಗಳು ಸಾಯುತ್ತಿವೆ. ಬಹುತೇಕ ಅರಣ್ಯಗಳಲ್ಲಿ ಹಣ್ಣಿನ ಗಿಡಗಳೇ ಇಲ್ಲ. ಹೀಗಾಗಿ ಪ್ರಾಣಿಗಳು ಕಾಡಿನಿಂದ ಹೊರಬರುತ್ತಿವೆ. ಬಂಡೀಪುರ ಅಭಯಾರಣ್ಯದಲ್ಲಿ ನವೆಂಬರ್ ತಿಂಗಳಿನಲ್ಲೇ ಕಾಳ್ಗಿಚ್ಚು ಕಾಣಿಸಿಕೊಂಡಿದೆ’ ಎಂದು ಅವರು ಹೇಳಿದರು.<br /> <br /> <strong>ಬಾಲಸುಬ್ರಮಣಿಯನ್ ನೀರಿನ ಸೂತ್ರ</strong><br /> * ನೀರಿನ ಸೋರಿಕೆಯನ್ನು ಆದಷ್ಟು ಬೇಗ ಕಡಿಮೆ ಮಾಡಬೇಕು. ಈ ಪ್ರಮಾಣ ಶೇ 15–20ಕ್ಕೆ ಇಳಿಯಬೇಕು.</p>.<p>* ನಗರದ 25 ಕೊಳಚೆ ನೀರು ಸಂಸ್ಕರಣಾ ಘಟಕಗಳು ಶೇ 100 ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಬೇಕು. ಸಂಸ್ಕರಿಸಿದ ಶೇ 75ರಷ್ಟು ನೀರನ್ನು ಪುನರ್ ಬಳಕೆ ಮಾಡಲು ತೃತೀಯ ಹಂತದ ಘಟಕಗಳನ್ನು ನಿರ್ಮಾಣ ಮಾಡಬೇಕು.<br /> <br /> * ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವಿಗೆ ಕಡಿವಾಣ ಹಾಕಬೇಕು. ಮಳೆ ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ರೂಪಿಸಬೇಕು.<br /> <br /> * 2030ರ ವೇಳೆ 30 ಲಕ್ಷ ಮನೆಗಳಿಗೆ ಹಾಗೂ 2040ರ ವೇಳೆಗೆ 40 ಮನೆಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು.<br /> <br /> * ಕುಡಿಯುವ ನೀರಿನ ಉಳಿತಾಯಕ್ಕಾಗಿ ಮನೆಗಳಲ್ಲಿ ಎರಡು ಹಂತದ ಪೈಪ್ ವ್ಯವಸ್ಥೆ ಅಳವಡಿಸಬೇಕು.<br /> <br /> * ನೀರಿನ ಮಿತ ಬಳಕೆ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.<br /> <br /> * ನಗರದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕೊಳವೆಬಾವಿಗಳು ಮುಂದಿನ 10 ವರ್ಷಗಳಲ್ಲಿ ಬತ್ತಿ ಹೋಗಲಿವೆ. ಕುಡಿಯುವ ನೀರಿಗೆ ಸಮಗ್ರ ಯೋಜನೆ ರೂಪಿಸದಿದ್ದರೆ ಈ ಅವಧಿಯಲ್ಲಿ ನಗರದ ಶೇ 50ರಷ್ಟು ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಬೆಂಗಳೂರು ಸಾಯುತ್ತಿರುವ ಮಹಾನಗರ’ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ವಿಶ್ಲೇಷಿಸಿದರು.<br /> <br /> ‘ವಾಯ್ಸಸ್ ಫ್ರಮ್ ದಿ ವಾಟರ್ಸ್’ ಸಂಘಟನೆಯ ಆಶ್ರಯದಲ್ಲಿ ಜಲದನಿಗಳು ಚಿತ್ರೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬತ್ತಿಹೋಗುತ್ತಿರುವ ನದಿಗಳು ಹಾಗೂ ಕೆರೆಗಳು’ ಸಂವಾದದಲ್ಲಿ ಅವರು ಮಾತನಾಡಿದರು.<br /> <br /> ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ 1.10 ಕೋಟಿ ಜನರು ಇದ್ದಾರೆ. ಶೇ 60ರಷ್ಟು ಮಂದಿ ಈಗಲೂ ಕೊಳವೆಬಾವಿಗಳ ನೀರನ್ನು ಅವಲಂಬಿಸಿದ್ದಾರೆ. ಜನಸಂಖ್ಯೆ ವರ್ಷಕ್ಕೆ ಶೇ 4ರಷ್ಟು ಹೆಚ್ಚಾಗುತ್ತಿದೆ. 29 ಟಿಎಂಸಿ ಅಡಿ ಪೂರೈಕೆಯಾದರೂ ನಗರದ ನೀರಿನ ಬೇಡಿಕೆಯನ್ನು ಈಡೇರಿಸುವುದು ಕಷ್ಟ’ ಎಂದು ಹೇಳಿದರು.<br /> <br /> ಹಳ್ಳಿಗಳೂ ನಗರದ ತೆಕ್ಕೆಯೊಳಗೆ: ‘ಸುತ್ತಮುತ್ತಲಿನ ಹಳ್ಳಿಗಳೆಲ್ಲ ಈಗ ರಾಜಧಾನಿಯ ಹೊಟ್ಟೆಯೊಳಗೆ ಸೇರಿಕೊಂಡಿವೆ. ಬಿಡಿಎ ವ್ಯಾಪ್ತಿ 1,300 ಚ.ಕಿ.ಮೀ. ಇದೆ. ಈಗ ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿ ಬಿಡಿಎ ಗಡಿಯನ್ನು ದಾಟಿ ಇಡೀ ನಗರ ಜಿಲ್ಲೆಯನ್ನು ವ್ಯಾಪಿಸಿದೆ. ಅಂದರೆ ಈಗಿನ ವಿಸ್ತಾರ 2,100 ಚ.ಕಿ.ಮೀ. ಈ ನಡುವೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ತನ್ನೊಳಗೆ ಸೆಳೆದುಕೊಳ್ಳಲು ಆರಂಭಿಸಿದೆ. ಈ ಎಲ್ಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸವಾಲು ಇದೆ’ ಎಂದು ಹೇಳಿದರು.<br /> <br /> <strong>ಮಳೆ ನೀರು ಸಂಗ್ರಹ– ದೊಡ್ಡ ಜೋಕ್: </strong>‘ನಗರದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯ ವಿಷಯ ದೊಡ್ಡ ಜೋಕ್ ಆಗಿದೆ. ನಗರದಲ್ಲಿ 90 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಚೆನ್ನೈಯಲ್ಲಿ 5 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆ ಇದೆ. ಜಲಮಂಡಳಿ ಕಡ್ಡಾಯದ ಗಡುವು ವಿಸ್ತರಿಸುತ್ತಲೇ ಇದೆ. ದಂಡ ವಿಧಿಸುವ ಶಾಸ್ತ್ರ ಮಾಡುತ್ತಲೇ ಇದೆ’ ಎಂದು ವ್ಯಂಗ್ಯವಾಡಿದರು.<br /> <br /> <strong>ಕಾವೇರಿ ನೀರೂ ಶುದ್ಧವಲ್ಲ:</strong> ‘ನಗರದಲ್ಲಿ ಪೂರೈಕೆಯಾಗುವ ಶೇ 49ರಷ್ಟು ನೀರು ಕುಡಿಯಲು ಯೋಗ್ಯವಲ್ಲ. ಕಾವೇರಿ ನೀರಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಹಂತಗಳಲ್ಲಿ ಶುದ್ಧೀಕರಿಸಿ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಪೈಪ್ಲೈನ್ಗಳು ಅಕ್ಕಪಕ್ಕದಲ್ಲೇ ಇವೆ. ಈ ಪೈಪ್ಲೈನ್ಗಳು 50–60 ವರ್ಷಗಳಷ್ಟು ಹಳೆಯವು. ಕಾವೇರಿ ನೀರಿಗೆ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಈ ನೀರು ಕಲುಷಿತಗೊಳ್ಳುತ್ತಿದೆ’ ಎಂದು ಅವರು ತಿಳಿಸಿದರು.<br /> <br /> <strong>ಕೆರೆಗಳ ವ್ಯವಸ್ಥಿತ ನಾಶ</strong>: ‘ನಗರದ ಕೆರೆಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗುತ್ತಿದೆ. ಆರಂಭದಲ್ಲಿ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ಕೆರೆಯ ದಡದಲ್ಲಿ ಸುರಿಯಲಾಗುತ್ತದೆ. ಬಳಿಕ ಪಕ್ಕದಲ್ಲಿ ಗುಡಿಯೊಂದನ್ನು ನಿರ್ಮಾಣ ಮಾಡಲಾಗುತ್ತದೆ. ಸ್ವಲ್ಪ ಸಮಯವಾದ ಬಳಿಕ ಗುಡಿಸಲು ತಲೆ ಎತ್ತುತ್ತದೆ. ವರ್ಷ ಕಳೆಯುವಷ್ಟರಲ್ಲಿ ಬಹುಮಹಡಿ ಕಟ್ಟಡವೊಂದು ನಿರ್ಮಾಣವಾಗುತ್ತದೆ’ ಎಂದು ಹೇಳಿದರು.<br /> <br /> <strong>ಕೋಲಾರದಲ್ಲಿ ದ್ರಾಕ್ಷಿ ಬೆಳೆ ಏಕೆ?</strong><br /> ‘ಕೋಲಾರದಲ್ಲಿ ಈ ಹಿಂದೆ ರಾಗಿ ಬೆಳೆಯಲಾಗುತ್ತಿತ್ತು. ಈಗ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಅಂತರ್ಜಲ ಪಾತಾಳಕ್ಕೆ ಇಳಿಯಲು ಇದೂ ಕಾರಣ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ. ಶ್ರೀನಿವಾಸಯ್ಯ ಹೇಳಿದರು. ‘1 ಕೆ.ಜಿ. ದ್ರಾಕ್ಷಿ ಬೆಳೆಯಲು 800 ಲೀ. ನೀರು ಬೇಕು. 3 ಕೆ.ಜಿ.ಗೆ 2,400 ಲೀ. ನೀರು ಬೇಕು. ಒಂದು ಬಾಟಲಿ ವೈನ್ ತಯಾರಿಸಲು 3 ಕೆ.ಜಿ. ದ್ರಾಕ್ಷಿ ಅಗತ್ಯ. ವೈನ್ಗಾಗಿ ಇಷ್ಟೊಂದು ನೀರು ಹಾಳು ಮಾಡುವ ಅಗತ್ಯ ಇದೆಯಾ’ ಎಂದು ಪ್ರಶ್ನಿಸಿದರು.<br /> <br /> <strong>ಚಳಿಗಾಲದಲ್ಲೇ ಜಲಪಾತಗಳಲ್ಲಿ ನೀರಿಲ್ಲ: ಲಿಯೋ ಸಲ್ಡಾನಾ</strong><br /> ಮಳೆ ಕೊರತೆಯಿಂದಾಗಿ ಕರ್ನಾಟಕ ಹಾಗೂ ಕೇರಳದ ಪಶ್ಚಿಮ ಘಟ್ಟಗಳ ಜಲಪಾತಗಳಲ್ಲಿ ನವೆಂಬರ್ ತಿಂಗಳಲ್ಲೇ ನೀರಿಲ್ಲ’ ಎಂದು ಪರಿಸರ ತಜ್ಞ ಲಿಯೋ ಸಲ್ಡಾನಾ ಹೇಳಿದರು.</p>.<p>‘ನಾನು ಕಳೆದ ವಾರ ಕೊಡಗು ಹಾಗೂ ವಯನಾಡು ಭಾಗದಲ್ಲಿ 800 ಕಿ.ಮೀ. ಸಂಚಾರ ಮಾಡಿದೆ. ಬಹುತೇಕ ಜಲಪಾತಗಳು ಬತ್ತಿ ಹೋಗಿದ್ದವು’ ಎಂದು ಅವರು ತಿಳಿಸಿದರು.<br /> <br /> ‘ರಾಜ್ಯದ ಅರಣ್ಯಗಳು ಸಾಯುತ್ತಿವೆ. ಬಹುತೇಕ ಅರಣ್ಯಗಳಲ್ಲಿ ಹಣ್ಣಿನ ಗಿಡಗಳೇ ಇಲ್ಲ. ಹೀಗಾಗಿ ಪ್ರಾಣಿಗಳು ಕಾಡಿನಿಂದ ಹೊರಬರುತ್ತಿವೆ. ಬಂಡೀಪುರ ಅಭಯಾರಣ್ಯದಲ್ಲಿ ನವೆಂಬರ್ ತಿಂಗಳಿನಲ್ಲೇ ಕಾಳ್ಗಿಚ್ಚು ಕಾಣಿಸಿಕೊಂಡಿದೆ’ ಎಂದು ಅವರು ಹೇಳಿದರು.<br /> <br /> <strong>ಬಾಲಸುಬ್ರಮಣಿಯನ್ ನೀರಿನ ಸೂತ್ರ</strong><br /> * ನೀರಿನ ಸೋರಿಕೆಯನ್ನು ಆದಷ್ಟು ಬೇಗ ಕಡಿಮೆ ಮಾಡಬೇಕು. ಈ ಪ್ರಮಾಣ ಶೇ 15–20ಕ್ಕೆ ಇಳಿಯಬೇಕು.</p>.<p>* ನಗರದ 25 ಕೊಳಚೆ ನೀರು ಸಂಸ್ಕರಣಾ ಘಟಕಗಳು ಶೇ 100 ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಬೇಕು. ಸಂಸ್ಕರಿಸಿದ ಶೇ 75ರಷ್ಟು ನೀರನ್ನು ಪುನರ್ ಬಳಕೆ ಮಾಡಲು ತೃತೀಯ ಹಂತದ ಘಟಕಗಳನ್ನು ನಿರ್ಮಾಣ ಮಾಡಬೇಕು.<br /> <br /> * ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವಿಗೆ ಕಡಿವಾಣ ಹಾಕಬೇಕು. ಮಳೆ ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ರೂಪಿಸಬೇಕು.<br /> <br /> * 2030ರ ವೇಳೆ 30 ಲಕ್ಷ ಮನೆಗಳಿಗೆ ಹಾಗೂ 2040ರ ವೇಳೆಗೆ 40 ಮನೆಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು.<br /> <br /> * ಕುಡಿಯುವ ನೀರಿನ ಉಳಿತಾಯಕ್ಕಾಗಿ ಮನೆಗಳಲ್ಲಿ ಎರಡು ಹಂತದ ಪೈಪ್ ವ್ಯವಸ್ಥೆ ಅಳವಡಿಸಬೇಕು.<br /> <br /> * ನೀರಿನ ಮಿತ ಬಳಕೆ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.<br /> <br /> * ನಗರದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>