ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ನಂತರ ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಅಮಾನತುಗೊಂಡಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಆರ್.ಟಿ.ಐ ಕಾರ್ಯಕರ್ತ ಸಾಯಿದತ್ತ ಶನಿವಾರ ದೂರು ನೀಡಿದ್ದಾರೆ.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ.ಎನ್. ಚಿಕ್ಕರಾಯಪ್ಪ ಮತ್ತು ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಯಾಗಿದ್ದ ಎಸ್.ಸಿ. ಜಯಚಂದ್ರ ಅವರು ಭ್ರಷ್ಟಾಚಾರದಿಂದ ಇಷ್ಟು ಪ್ರಮಾಣದ ಆಸ್ತಿ ಮತ್ತು ಹಣ ಗಳಿಸಿರುವ ಸಾಧ್ಯತೆ ಇದೆ. ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ.
ಮಾನವ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಸಂಚಾಲಕ ರಾಮಮೂರ್ತಿಗೌಡ ಎಂಬುವರು ಕೂಡ ಎಸಿಬಿಗೆ ದೂರು ನೀಡಿದ್ದು, ಇಬ್ಬರು ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವರಿಗೆ ಸೇರಿದ್ದು ಎಂಬ ಗುಮಾನಿ ಇದೆ. ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರಬೇಕು ಎಂದು ಕೋರಿದ್ದಾರೆ.