ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಂಡಗಿಗೆ ಹೋದರೆ ಸೂಜಿಗಲ್ಲಿನಂತೆ ಆಕರ್ಷಿಸುವ ಈ ಫಲವತ್ತಾದ ಕೃಷಿಭೂಮಿ ಕಾಣಿಸುತ್ತದೆ. ಇಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳಿವೆ, ಮುಗಿಲೆತ್ತರಕ್ಕೆ ಬಲಿತು ನಿಂತಿರುವ ರಬ್ಬರ್ ಗಿಡಗಳು, ಅಡಿಕೆ ಮರಗಳು, ಸಿಲ್ವರ್ ಓಕ್ ಗಿಡಗಳು, ಬಾಳೆ, ತೆಂಗು, ಕಾಫಿ, ಕಾಳು ಮೆಣಸು... ಪಟ್ಟಿ ಬೆಳೆಯುತ್ತದೆ. ರಬ್ಬರ್ ಗಿಡಗಳ ಸಾಲಿನಲ್ಲಿ ಓಡಾಡಿದರೆಂತು ಹವಾನಿಯಂತ್ರಿತ ಕೋಣೆಯಲ್ಲಿಯೇ ಇದ್ದೆವೇನೋ ಅನ್ನಿಸುತ್ತದೆ.
ಈ ಕೃಷಿಭೂಮಿ ದೀಪಕ್ ಭಟ್ಟ ಅವರದ್ದು. 13 ವರ್ಷಗಳ ಶ್ರಮದ ಫಲವಿದು. ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಈಗ ಈಜಿ ದಡ ಸೇರಿದ್ದಾರೆ. ತಮ್ಮ ಕೃಷಿಭೂಮಿಯನ್ನು ಫಲವತ್ತಾಗಿಸಲು ದೀರ್ಘ ತಪಸ್ಸೇ ಮಾಡಿದ್ದಾರೆ. ದೀಪಕ್ ಮೂಲತಃ ಪುತ್ತೂರಿನವರು. ಎಂ.ಎಸ್ಸಿ. ಪದವೀಧರರಾದ ಇವರಿಗೆ ಔಷಧೀಯ ಗಿಡಗಳನ್ನು ಬೆಳೆಸಬೇಕು ಎಂಬ ಹೆಬ್ಬಯಕೆ ಇತ್ತು. ಅವರು ಯೋಗ್ಯ ಭೂಮಿಯನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ತಂಡಗಿಯ ಕೃಷಿಭೂಮಿಯಲ್ಲಿ ಔಷಧಿ ಗಿಡಗಳನ್ನೇ ನಾಟಿ ಮಾಡಲಾಗಿತ್ತು.
ಸುಮಾರು 48 ಎಕರೆ ವಿಸ್ತಾರವಾಗಿ ಇರುವ ಭೂಮಿಯನ್ನು ನೋಡಿದ ಅವರು 2003ರಲ್ಲಿ ಖರೀದಿ ಮಾಡಿದರು. ಇಲ್ಲಿದ್ದ ಔಷಧೀಯ ಸಸ್ಯಗಳೊಂದಿಗೆ ಮತ್ತಷ್ಟು ಗಿಡಗಳನ್ನು ನೆಟ್ಟು ಉತ್ಸಾಹ, ಛಲದಿಂದ ಆರೈಕೆ ಮಾಡಿದರು. ಆದರೆ, ದುರದೃಷ್ಟ... ಆ ಸಸ್ಯಗಳು ಸರಿಯಾಗಿ ಬೆಳೆಯಲೇ ಇಲ್ಲ! ಔಷಧೀಯ ಗಿಡಗಳಿಗಿಂತ ಕಳೆಗಳೇ ತುಂಬಿಹೋದವು. ಆಗಲೇ ದೀಪಕ್ ಅವರಿಗೆ ವಾಸ್ತವಿಕತೆ ಅರ್ಥವಾಗಿತ್ತು. ಮಲೆನಾಡಿನ ಭೂಮಿ ಔಷಧೀಯ ಗಿಡಗಳನ್ನು ಬೆಳೆಯಲು ಯೋಗ್ಯವಲ್ಲ. ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನೇ ಬೆಳೆಯಬೇಕು ಎಂಬುದನ್ನು ನಿರ್ಧರಿಸಿದರು. ಪರ್ಯಾಯಬೆಳೆಗಳ ಕೃಷಿ ಮಾಡಲು ಮುಂದಾದರು.
2006ರ ನಂತರ ಇವರು ನೆಲ್ಲಿ, ಅನಾನಸ್, ಅಡಿಕೆ, ಬಾಳೆ, ಕಾಫಿ, ತೆಂಗು... ಮುಂತಾದ ಗಿಡಗಳನ್ನು ವ್ಯವಸ್ಥಿತವಾಗಿ ನೆಟ್ಟರು. ನೆಲ್ಲಿಕಾಯಿಗೆ ಬೇಡಿಕೆಯೂ ಇರದಿದ್ದ ಕಾರಣ, ಅದನ್ನು ತೆಗೆದು ರಬ್ಬರ್ ಗಿಡ ನೆಟ್ಟರು. ಅನಾನಸ್ ಕೃಷಿಗೂ ಬೇರೆ ಬೇರೆ ಸಮಸ್ಯೆ ಉದ್ಭವಿಸಿದ್ದರಿಂದ ಆ ಜಾಗದಲ್ಲಿ ಸಿಲ್ವರ್ ಓಕ್ ಗಿಡಗಳು ಬಂದವು. ಅಲ್ಲಿಯೇ ಈಗ ಕಾಳುಮೆಣಸು ಕೃಷಿಗೂ ಮುಂದಾಗಿದ್ದಾರೆ. ಜೊತೆಗೆ, ಪಪ್ಪಾಯಿ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇವರು ಹನ್ನೊಂದು ಎಕರೆಯಲ್ಲಿ ಅಡಿಕೆಕೃಷಿ ಮಾಡುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ತೋಟಕ್ಕೆ ಸುಭದ್ರವಾದ ಮುಚ್ಚಿಗೆ ಮಾಡುತ್ತಾರೆ. ಈ ಮುಚ್ಚಿಗೆಗೆ ತಮ್ಮದೇ ರಬ್ಬರ್ ಪ್ಲಾಟಿನಲ್ಲಿ ಧಾರಾಳವಾಗಿ ಬೀಳುವ ದರಕುಗಳನ್ನೇ ಬಳಸುತ್ತಾರೆ. ಆರು ಎಕರೆಯಷ್ಟೇ ಫಲ ಸದ್ಯ ಬರುತ್ತಿದ್ದು, ಈ ವರ್ಷ 2060 ಕ್ವಿಂಟಲ್ ಫಸಲು ಸಿಕ್ಕಿದೆ. ಕಳೆದ ಜೂನ್ನಲ್ಲಿ ಐದು ಸಾವಿರ ಬಾಳೆಗಿಡಗಳನ್ನು ನೆಟ್ಟಿದ್ದು ಅವು ಭೀಮ ಗಾತ್ರದ ಗೊನೆಗಳನ್ನು ತನ್ನ ಒಡೆಯನಿಗೆ ನೀಡಲು ಸಜ್ಜಾಗಿ ನಿಂತಿವೆ.