ಮಂಡ್ಯ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನ ಹಳ್ಳಿಯಲ್ಲಿ ತಾಲ್ಲೂಕು ಬೋರ್ಡ್ ಪ್ರೌಢಶಾಲೆ ಕಟ್ಟಡ ನಿರ್ಮಾಣದ ಸಹಾಯರ್ಥವಾಗಿ ನೃತ್ಯ ಪ್ರದರ್ಶನ ನೀಡಿದ್ದರು.1967ರಲ್ಲಿ ಮೈಸೂರು ವಿಶ್ವವಿಶ್ವವಿದ್ಯಾಲಯ ಕ್ರಾಫರ್ಡ್ ಹಾಲಿನಲ್ಲಿ ನಟಿ ಜಯಲಲಿತಾ ಅವರು ಶಾಲೆಯ ಕಟ್ಟಡ ನಿರ್ಮಾಣದ ನೆರವಿಗಾಗಿ ಹೆಜ್ಜೆ ಹಾಕಿದ್ದರು.
ನಗುವಿನಹಳ್ಳಿಯಲ್ಲಿ ಶಾಲೆ ಯೊಂದನ್ನು ನಿರ್ಮಿಸಲು ಗ್ರಾಮದ ಮುಖಂಡರು ನಿರ್ಧರಿಸಿದ್ದರು. ಆದರೆ, ಆರ್ಥಿಕ ಮುಗ್ಗಟ್ಟು ಎದುರಾಯಿತು. ಜಿಲ್ಲೆಯವರೇ ಆದ, ಖ್ಯಾತ ನಟಿ ಜಯಲಲಿತಾ ಅವರಿಂದ ನೃತ್ಯ ಕಾರ್ಯಕ್ರಮ ಏರ್ಪಡಿಸಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದರು.
ಹಾಸ್ಯ ನಟ ಬಾಲಕೃಷ್ಣ ಅವರ ನೆರವಿನಿಂದ ಜಯಲಲಿತಾ ಅವರನ್ನು ಭೇಟಿಯಾಗಿ ಶಾಲೆ ಕಟ್ಟಡ ನಿರ್ಮಾಣ ಸಹಾಯಾರ್ಥ ನೃತ್ಯ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರವಾಗಬೇಕು ಎಂದು ಕೋರಿದರು.
1967 ಮಾರ್ಚ್ 19ರಂದು ಮೈಸೂರು ವಿ.ವಿ ಕ್ರಾಫರ್ಡ್ ಹಾಲಿನಲ್ಲಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಯಿತು. ₹ 10, 25, 50 ಪ್ರವೇಶ ಧನ ನಿಗದಿಯಾಯಿತು. ಕಿಕ್ಕಿರಿದು ಜನರು ಸೇರಿದ್ದರಿಂದ ₹ 48 ಸಾವಿರ ಹಣ ಸಂಗ್ರಹವಾಯಿತು. ಕಾರ್ಯಕ್ರಮಕ್ಕೆ ₹ 18 ಸಾವಿರ ಖರ್ಚಾಗಿತ್ತು. ₹ 30 ಸಾವಿರ ಉಳಿಯಿತು. ಒಂದು ರೂಪಾಯಿಯೂ ಸಂಭಾವನೆ ಪಡೆಯದ ಅವರು, ಎಲ್ಲ ಹಣವನ್ನು ಶಾಲಾ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಹೇಳಿದರು ಎಂದು ಗ್ರಾಮದ ಜನತೆ ಸ್ಮರಿಸುತ್ತಾರೆ.