ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಬಾಲ್ಯ ಕಳೆದಿದ್ದ ಜಯಲಲಿತಾ

Last Updated 5 ಡಿಸೆಂಬರ್ 2016, 20:06 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕ ಮತ್ತು ತಮಿಳುನಾಡು ಜನತೆ ಸಹಬಾಳ್ವೆಯಿಂದ ಬದುಕಬೇಕೆಂದು ನಾಡದೇವತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ’ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು 2011ನೇ ಫೆ. 24ರಂದು ಚಾಮುಂಡಿಬೆಟ್ಟದಲ್ಲಿ ಆಡಿದ ಮಾತಿದು. 63ನೇ ಜನ್ಮದಿನಾಚರಣೆಯ ಪ್ರಯುಕ್ತ ಪೂಜೆ ಸಲ್ಲಿಸಲು ಬಂದಿದ್ದೇ ಮೈಸೂರಿನ ಕೊನೆಯ ಭೇಟಿ.

ತಮಿಳುನಾಡು ರಾಜಯಕೀಯದಲ್ಲಿ ‘ಅಮ್ಮ’ನಾಗಿ ಬೆಳೆದರೂ ಜಯಲಲಿತಾ ಅವರು ಹುಟ್ಟೂರಿನ ಕೊಂಡಿಯನ್ನು ಕಡಿದುಕೊಂಡಿರಲಿಲ್ಲ. ಜನ್ಮದಿನಾಚರಣೆಗೆ ಚಾಮುಂಡಿಬೆಟ್ಟಕ್ಕೆ  ಧಾವಿಸಿ ಪೂಜೆ ಸಲ್ಲಿಸುವ ವಾಡಿಕೆ ಇಟ್ಟುಕೊಂಡಿದ್ದರು. ಮುಖ್ಯ ಮಂತ್ರಿಯಾಗಿದ್ದಾಗಲೂ ಎರಡು ಬಾರಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಇಲ್ಲಿನ ಚೆಲುವಾಂಬ ಆಸ್ಪತ್ರೆಯಲ್ಲಿ 1948ರ ಫೆ. 24ರಂದು ಜನಿಸಿದ ಜಯಲಲಿತಾ, ಬಾಲ್ಯವನ್ನು ಮೈಸೂ ರಿನಲ್ಲಿಯೇ ಕಳೆದರು.  ಅರಮನೆಯ ನಿಕಟವರ್ತಿಯಾಗಿದ್ದ ತಂದೆ ಜಯರಾಂ ಹಾಗೂ ಮೇಲುಕೋಟೆ ಮೂಲದ ಸಂಧ್ಯಾ ದಂಪತಿಯ ಪುತ್ರಿ ಜಯಲಲಿತಾ 1952ರ ವರೆಗೆ ಸಾಂಸ್ಕೃತಿಕ ನಗರಿಯಲ್ಲಿದ್ದರು. ಜಯಲಲಿತಾ ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಸಂಧ್ಯಾ ಅವರು ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿದರು. ಲಕ್ಷ್ಮಿಪುರಂನಲ್ಲಿರುವ ಇವರ ‘ಸ್ವರ್ಣವಿಲಾಸ’ ನಿವಾಸ ಈಗ ಕ್ಲಬ್‌ ಆಗಿ ಪರಿವರ್ತನೆಯಾಗಿದೆ. ಕ್ಲಬ್‌ನಲ್ಲಿರುವ ಜಯಲಲಿತಾ ಅವರ ಭಾವಚಿತ್ರ ಇತಿಹಾಸದ ಕುರುಹುವಾಗಿ ಉಳಿದಿದೆ.

ಜಯರಾಂ ಅವರ ಇಬ್ಬರು ಪತ್ನಿಯರಲ್ಲಿ ಎಲ್‌.ಕೆ.ಜಯಮ್ಮಾಳ್‌ ಮೊದಲನೇಯವರು. ಇವರ ಪುತ್ರ ಎನ್.ಜೆ.ವಾಸುದೇವನ್ ತಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರದಲ್ಲಿ ನೆಲೆಸಿದ್ದಾರೆ. ಆಸ್ತಿಯ ಮೇಲೆ ಸಂಧ್ಯಾ ಅವರು ಸಾಧಿಸಿದ್ದ ಹಕ್ಕನ್ನು ಪ್ರಶ್ನಿಸಿ ಜಯಮ್ಮಾಳ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಸ್ತಿಯನ್ನು ಸಮವಾಗಿ ಹಂಚಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದ ಬಳಿಕ ಸಂಧ್ಯಾ ಅವರು ಮೈಸೂರಿನ ಸಂಬಂಧವನ್ನು ಕಡಿದುಕೊಂಡರು.

‘ಟಿ.ವಿ ಮಾಹಿತಿಯನ್ನೇ ನಾನೂ ನಂಬಿದ್ದೇನೆ ಅನಾರೋಗ್ಯದ ಕಾರಣ ಚೆನ್ನೈಗೆ ತೆರಳಲು ಸಾಧ್ಯವಾಗುತ್ತಿಲ್ಲ’ ಎಂದು ವಾಸುದೇವನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

2 ತಿಂಗಳ ಹಿಂದೆಯೆ ಹದಗೆಟ್ಟ ಆರೋಗ್ಯ
* ಸೆಪ್ಟೆಂಬರ್‌ 22:  ಜ್ವರ ಮತ್ತು ನಿರ್ಜಲೀಕರಣದಿಂದ (ಡಿ ಹೈಡ್ರೇಷನ್‌) ಬಳಲುತ್ತಿದ್ದ ಜಯಲಲಿತಾ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು

* ಸೆಪ್ಟೆಂಬರ್‌ 23: ‘ಜಯಲಲಿತಾ ಆರೋಗ್ಯದಿಂದ ಇದ್ದಾರೆ. ಆಹಾರ ಸೇವಿಸುತ್ತಿದ್ದಾರೆ’ ಎಂಬ ಆಸ್ಪತ್ರೆ ಹೇಳಿಕೆಯನ್ನು ಉಲ್ಲೇಖಿಸಿ ಎಐಎಡಿಎಂಕೆ ಟ್ವೀಟ್‌

* ಸೆಪ್ಟೆಂಬರ್‌ 25: ಹೆಚ್ಚಿನ ಚಿಕಿತ್ಸೆಗಾಗಿ ಜಯಲಲಿತಾ ಅವರನ್ನು ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂಬ ವರದಿಯನ್ನು ತಳ್ಳಿ ಹಾಕಿದ ಆಸ್ಪತ್ರೆ. ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳುತ್ತಾರೆ ಎಂದು ಘೋಷಣೆ

* ಸೆಪ್ಟೆಂಬರ್‌ 27: ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಆಸ್ಪತ್ರೆಯಿಂದಲೇ ಕೆಲಸ ಆರಂಭಿಸಿದ ಜಯಲಲಿತಾ

* ಸೆಪ್ಟೆಂಬರ್‌ 29: ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅಮ್ಮ. ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ ಎಂಬ ಆಸ್ಪತ್ರೆಯ ಹೇಳಿಕೆಯನ್ನು ಟ್ವೀಟ್‌ ಮಾಡಿದ ಎಐಎಡಿಎಂಕೆ

* ಸೆಪ್ಟೆಂಬರ್‌ 30:  ರಾಜ್ಯದ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ಹರಡಿರುವ ವದಂತಿಗಳನ್ನು ಕೊನೆಗಾಣಿಸಲು, ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಮತ್ತು ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರ ಛಾಯಾಚಿತ್ರಗಳನ್ನು  ಬಹಿರಂಗ ಪಡಿಸುವಂತೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಒತ್ತಾಯ

* ಆರೋಗ್ಯ ಸ್ಥಿತಿಯ ಬಗ್ಗೆ ವದಂತಿಗಳನ್ನು ಹರಡುತ್ತಿರುವವರನ್ನು ಬಂಧಿಸಲು  ಆರಂಭಿಸಿದ ಪೊಲೀಸರು

* ಅಕ್ಟೋಬರ್‌ 1: ಜಯಲಲಿತಾ ಗುಣಮುಖರಾಗುತ್ತಿದ್ದಾರೆ. ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಹೇಳಿಕೆ ನೀಡಿದ ಎಐಎಡಿಎಂಕೆ. ಆದರೆ, ಛಾಯಾಚಿತ್ರಗಳನ್ನು ಬಿಡುಗಡೆ ಮಾಡಲು ನಿರಾಕರಣೆ

* ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯಪಾಲ ಸಿ.ವಿದ್ಯಾಸಾಗರ್‌.  ಆರೋಗ್ಯ ವಿಚಾರಣೆ

* ಅಕ್ಟೋಬರ್‌ 2: ಜಯಾ ಅವರು ಸೋಂಕಿನಿಂದ ಬಳಲುತ್ತಿದ್ದಾರೆ. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಹೇಳಿಕೆ

* ಜಯಾ ಆರೋಗ್ಯದ ಮೇಲೆ ನಿಗಾ ಇಡುವುದಕ್ಕಾಗಿ ಲಂಡನ್‌ನಿಂದ ತಜ್ಞ ವೈದ್ಯ ಡಾ. ರಿಚರ್ಡ್‌ ಬಿಯಲ್‌  ಅವರಿಗೆ ಬುಲಾವ್‌. ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದ್ಯರೊಂದಿಗೆ ಮಾತುಕತೆ.

* ಅಕ್ಟೋಬರ್‌ 6: ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ನ ತಜ್ಞ ವೈದ್ಯರ ತಂಡ ಆಗಮನ

* ಅಕ್ಟೋಬರ್‌ 11: ಮುಖ್ಯಮಂತ್ರಿ ಹುದ್ದೆ ಹೊರತುಪಡಿಸಿ ಜಯಾ ಅವರ ಬಳಿ ಇದ್ದ ಖಾತೆಗಳು ಪನ್ನೀರಸೆಲ್ವಂ ಅವರಿಗೆ ವರ್ಗಾವಣೆ.

* ನವೆಂಬರ್‌ 4: ಜಯಲಲಿತಾ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಘೋಷಿಸಿದ ಅಪೋಲೊ ಆಸ್ಪತ್ರೆ

* ಅಕ್ಟೋಬರ್‌ 12: ಜಯಲಲಿತಾ ಸಂಪೂರ್ಣ ಗುಣಮುಖ. ಅವರು ಮನೆಗೆ ತೆರಳಬಹುದು ಎಂದು ವೈದ್ಯರ ಹೇಳಿಕೆ

* ನವೆಂಬರ್‌ 19: ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕು ತಡೆಯುವ ಉದ್ದೇಶದಿಂದಷ್ಟೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ ಅಪೋಲೊ ಆಸ್ಪತ್ರೆ ಅಧ್ಯಕ್ಷ ಪ್ರತಾಪ್‌ ಸಿ. ರೆಡ್ಡಿ

* ಡಿಸೆಂಬರ್‌ 4: ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಗಿದೆ ಎಂದು ಬೆಳಿಗ್ಗೆ ಹೇಳಿಕೆ ನೀಡಿದ ವೈದ್ಯರು. ರಾತ್ರಿಯ ವೇಳೆಗೆ ಹೃದಯ ಸ್ತಂಭನ. ಚಿಂತಾಜನಕ ಸ್ಥಿತಿಗೆ ಜಾರಿದ ಜಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT