ಇಂಗ್ಲೀಷ್ನ ಸ್ಥಾನಮಾನದ ಮುಂದುವರಿಕೆ
ನವದೆಹಲಿ, ಡಿ. 9– ಹಿಂದೀಯೇತರ ಪ್ರದೇಶಗಳವರು ಅಪೇಕ್ಷಿಸುವಷ್ಟು ಕಾಲದವರೆಗೂ ಇಂಗ್ಲೀಷನ್ನೇ ಆಡಳಿತದ ಸಹಭಾಷೆಯನ್ನಾಗಿ ಮುಂದುವರಿಸಲಾಗುವುದು ಎಂಬ ದಿವಂಗತ ಪ್ರಧಾನಿ ಶ್ರೀ ನೆಹರೂ ಅವರ ಆಶ್ವಾಸನೆಯನ್ನು ಒಳಗೊಂಡ ಮಸೂದೆಯೊಂದನ್ನು ಆದಷ್ಟು ಶೀಘ್ರವಾಗಿ ಪಾರ್ಲಿಮೆಂಟಿನಲ್ಲಿ ಮಂಡಿಸಲಾಗುವುದು. ಈ ವಿಷಯವನ್ನು ಗೃಹಖಾತೆಯ ಉಪಸಚಿವ ಶ್ರೀ ವಿ.ಸಿ. ಶುಕ್ಲ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.
ರಾಜ್ಯದ ಯೋಜನೆ 450 ಕೋಟಿಗೂ ಮೀರುವ ಸಂಭವ
ಬೆಂಗಳೂರು, ಡಿ. 9– ಕೇಂದ್ರವೇ ಪ್ರಕೃತ ನೇರವಾಗಿ ಮೀನುಗಾರಿಕೆ ಯೋಜನೆಗಳು, ಸಂಶೋಧನೆ ಕಾರ್ಯಕ್ರಮ ಮುಂತಾದುವುಗಳಿಗೆ ಒದಗಿಸುತ್ತಿರುವ ಹಣವನ್ನು ರಾಜ್ಯಕ್ಕೆ ನೀಡಬೇಕೆಂಬ ಮೈಸೂರು ಸರಕಾರದ ಸಲಹೆಯನ್ನು ಕೇಂದ್ರವು ಒಪ್ಪಿಕೊಂಡರೆ ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಗಾತ್ರ 450 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚುವ ಸಂಭವವಿದೆ. ರಾಜ್ಯದ ಸಲಹೆಯನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಉಪಸಮಿತಿಯು ಚರ್ಚಿಸುತ್ತಿದೆ.
ಕೃಷ್ಣಾ ಯೋಜನೆಗೆ ಕೇಂದ್ರದ ಪ್ರತ್ಯೇಕ ಸಹಾಯವಿಲ್ಲ?
ಬೆಂಗಳೂರು, ಡಿ. 9– ಸುಮಾರು 120 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯಿಂದ ಹೊರಗಿಟ್ಟು, ಅದಕ್ಕೆ ಪ್ರತ್ಯೇಕವಾಗಿ ಹಣ ಒದಗಿಸಲು ಕೇಂದ್ರ ಸರಕಾರ ನಿರಾಕರಿಸಿದೆಯೆಂದು ತಿಳಿದುಬಂದಿದೆ.