ಚಾಮರಾಜನಗರ: ಪಡಿತರ ವಿತರಣೆಯ ಬದಲು ನಗದು ಕೂಪನ್ ವಿತರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಪ್ರಣತಿ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಒಕ್ಕೂಟದ ಸದಸ್ಯರು ಬಿ. ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಸ್ತುತ ಮಳೆ ಕೊರತೆಯಿಂದ ಜಿಲ್ಲೆ ಯಲ್ಲಿ ಬರಗಾಲ ಪರಿಸ್ಥಿತಿ ತಲೆದೋರಿದೆ. ಜನರು ಉದ್ಯೋಗ ಇಲ್ಲದೆ ನೆರೆಯ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಅಲ್ಲಿಯೂ ಸರಿಯಾದ ಕೂಲಿ ಸಿಗದೆ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ಪಡಿತರ ವಿತರಣೆ ನಿಲ್ಲಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಪಡಿತರ ಪದಾರ್ಥದ ಬದಲು ನಗದು ಕೂಪನ್ ನೀಡಲು ಮುಂದಾಗಿ ರುವುದು ಅವೈಜ್ಞಾನಿಕ. ಇದರಿಂದ ಕಡುಬಡವರಿಗೆ ಹೆಚ್ಚಿನ ತೊಂದರೆ ಯಾಗಲಿದೆ. ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಸರ್ಕಾರ ಕೂಡಲೇ ಈ ಪದ್ಧತಿ ಕೈಬಿಡಬೇಕು. ಹಿಂದಿನ ಪದ್ಧತಿಯನ್ನೇ ಮುಂದುವರಿಸ ಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕ ವಾಗಿ ಆಹಾರ ಭದ್ರತೆ ನೀಡಬೇಕು. ಆದರೆ, ಬಡವರ ಆಹಾರ ಕಸಿದು ಕೊಳ್ಳುವ ಸಾಹಸಕ್ಕೆ ಮುಂದಾಗ ಬಾರದು. ನಗದು ಕೂಪನ್ ವ್ಯವಸ್ಥೆಯು ಕಾಳದಂಧೆಕೋರರಿಗೆ ಅನುಕೂಲ ವಾಗಲಿದೆ. ಹಾಗಾಗಿ, ಬಡವರ ಹಿತದೃಷ್ಟಿ ಯಿಂದ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರಾದ ಲೀನಾಕುಮಾರಿ, ನೀಲಮ್ಮ, ಸೌಭಾಗ್ಯಾ, ಗೀತಾ, ಮಾದಮ್ಮ, ಶಿವಮ್ಮ, ನಿಂಗಮ್ಮ, ಸುಂದ್ರಮ್ಮ, ಮಹದೇವಮ್ಮ, ಯಶೋದಾ, ನಾಗಮ್ಮ ಇದ್ದರು.