ಹಗರಿಬೊಮ್ಮನಹಳ್ಳಿ: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಐವರು ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ ಬೆಳೆನಷ್ಟ ಪರಿಹಾರವನ್ನು ನೀಡದೇ ರೈತರ ಬದುಕಿನೊಂದಿಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದರು.
ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅನಿಲ್ ನಾಯ್ಡು ಮಾತನಾಡಿ, ಫೆಬ್ರವರಿ 14ರಂದು ಬಿಜೆಪಿ ಪದಾಧಿಕಾರಿಗಳು ಪ್ರೇಮಿಗಳ ದಿನಾಚರಣೆಯ ಬದಲಾಗಿ ವಿವೇಕ ಬ್ಯಾಂಡ್ ಧರಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರತಿ ತಿಂಗಳು 14ರಂದು ಸ್ವಚ್ಛತೆ, ಅರೋಗ್ಯ ಶಿಬಿರ ಆಯೋಜಿಸಬೇಕು ಎಂದರು.
ಪಕ್ಷದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆ ಉಸ್ತುವಾರಿ ಮೃತ್ಯುಂಜಯ ಜಿನಗಾ, ಜಿಲ್ಲೆಯಲ್ಲಿ ಜನವರಿ10ರಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನೇತೃತ್ವದ ತಂಡ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದೆ. ಕ್ಷೇತ್ರದಲ್ಲಿ ಪಕ್ಷದ ಪದಾಧಿಕಾರಿಗಳು ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ತಿಳಿಸಿದರು.
ಸಂಘಟನೆ ಕುರಿತು ಜಿಲ್ಲಾ ಘಟಕದ ಕಾರ್ಯದರ್ಶಿ ಪೂಜಪ್ಪ ಮಾಹಿತಿ ಪಡೆದರು. ಮಾಜಿ ಅಧ್ಯಕ್ಷ ಕೆ.ರೋಹಿತ್ ಮಾತನಾಡಿದರು. ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುರುಸಿದ್ದಪ್ಪ, ಕೆ.ಎಚ್. ಮಲ್ಲಿಕಾರ್ಜುನ, ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ರೈತ ಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ. ಸೂರ್ಯಬಾಬು, ಮಂಡಲ ಪ್ರಕೋಷ್ಠ ಸಂಚಾಲಕ ರಾಘವೇಂದ್ರ ಶೆಟ್ಟಿ, ಪ್ರಮುಖ ಪೊಲೀಸ್ ರಾಮಾನಾಯ್ಕ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಕೆ.ಎಚ್.ನಾಯ್ಕ, ಉಪಾಧ್ಯಕ್ಷ ಬಂಗಾರಿ ಮಂಜುನಾಥ, ರೈತಮೋರ್ಚಾ ಮಾಜಿ ಅಧ್ಯಕ್ಷ ಅಂಗಡಿ ಗವಿಸಿದ್ದಪ್ಪ ಇದ್ದರು.
ಪಕ್ಷದ ಉಮಾಪತಿ ಸ್ವಾಮಿ ಸ್ವಾಗತಿಸಿ, ಜೆ.ಬಿ.ಶರಣಪ್ಪ ನಿರೂಪಿಸಿ, ಡಾ. ಅಜ್ಜಯ್ಯ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.