ಮುಳಬಾಗಲು: ತಾಲ್ಲೂಕು ವ್ಯಾಪ್ತಿಯಲ್ಲಿ ಆಲೂಗಡ್ಡೆ ಬೆಳೆಯ ಫಸಲು ಉತ್ತಮವಾಗಿದ್ದು ರೈತರಲ್ಲಿ ಸಂತಸ ಉಂಟು ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣ ಬೆಳೆಗೆ ಹೂಡಿದ ಬಂಡವಾಳವನ್ನು ವಾಪಸು ಪಡೆಯಲು ಸಾಧ್ಯವೇ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಆಲೂಗಡ್ಡೆ ನಾಟಿ ಮಾಡಲಾಗಿತ್ತು. ಈಗ ಬೆಳೆ ಕೈಗೆ ಬಂದಿದೆ. ರೈತರು ಒಂದು ಮೂಟೆ ಬಿತ್ತನೆ ಬೀಜಕ್ಕೆ ₹ 2200 ರಂತೆ ಖರೀದಿಸಿ ನಾಟಿ ಮಾಡಿದರು. ಗೊಬ್ಬರ, ಔಷಧಿ, ಕೃಷಿ ವೆಚ್ಚ ಸೇರಿದಂತೆ ನಾಟಿ ಮಾಡಿದಾಗಿ ನಿಂದ ಆಲೂಗಡ್ಡೆ ರಾಶಿ ಮಾಡುವವ ರೆಗೂ ರೈತರಿಗೆ ಹೆಚ್ಚಿನ ಪ್ರಮಾಣದ ಲ್ಲಿಯೇ ಹಣ ಖರ್ಚಾಗಿದೆ.
ಬೆಳೆ ಕಟಾವಿನ ನಂತರ ಹಣ ನೀಡುವುದಾಗಿ ಗೊಬ್ಬರ, ಕೀಟನಾಶಕ ವನ್ನು ಅಂಗಡಿ ಮಾಲೀಕರಿಂದ ರೈತರು ಸಾಲ ತಂದು ಸಿಂಪಡಿಸಿದ್ದಾರೆ. ಈಗ ಬೆಳೆ ಕೈಗೆ ಬಂದಿದೆ.ಆದರೆ ಬೆಲೆಯೇ ಇಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆ ಯಲ್ಲಿರುವ ಬೆಲೆ ಯಾವುದಕ್ಕೂ ಸಾಲುದು. ಕೃಷಿಯಿಂದ ತೀವ್ರವಾದ ನಷ್ಟವನ್ನು ಅನುಭವಿಸುತ್ತಿದ್ದೇವೆ ಎನ್ನುವುದು ರೈತರ ಅಳಲು.
ಅಲ್ಲದೆ ಔಷಧಿ ಮತ್ತು ಗೊಬ್ಬರಗಳ ಅಂಗಡಿ ಮಾಲೀಕರು ಸಾಲ ಮರಳಿಸುವಂತೆ ಮನೆ ಬಾಗಿಲ ಬಳಿಗೆ ಬರುತ್ತಿದ್ದಾರೆ. ಸಾಲ ತೀರಿಸುವುದು ಇರಲಿ ಬೆಳೆ ಕಟಾವು ಮಾಡಿಸುವ ಕೂಲಿ ಯಾದರೂ ದೊರೆಯುತ್ತದೆಯೇ ಎನ್ನುವ ಅನುಮಾನವನ್ನು ಹಲವು ರೈತರು ವ್ಯಕ್ತಪಡಿಸುವರು. ಬರದ ನಡುವೆಯೂ ಬೆಳೆ ಬೆಳೆದಿದ್ದ ರೈತರಿಗೆ ಬೆಲೆ ಕುಸಿತದ ಬರೆ ತೀವ್ರವಾಗಿಯೇ ತಟ್ಟಿದೆ.