ಅಮೀನಗಡ: ಒಂಬತ್ತನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ಚತುರ್ಮುಖ ಬ್ರಹ್ಮ ಶಿಲ್ಪ ಇಲ್ಲಿಗೆ ಸಮೀಪದ ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಗ್ರಾಮದ ತಾರಾ ಬಸಪ್ಪ ಉದ್ಯಾನದಲ್ಲಿ ಭಾನುವಾರ ಪತ್ತೆಯಾಗಿದೆ.
ಪುರಾತತ್ವ ಇಲಾಖೆ ವತಿಯಿಂದ ಉದ್ಯಾನ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮಲ್ಲಪ್ಪ ಎಮ್ಮಿ ಹಾಗೂ ರಾಜು ಬಡಿಗೇರ ಅವರಿಗೆ ಶನಿವಾರ ಸಂಜೆ ಕಲ್ಲೊಂದು ಸಿಕ್ಕಿತ್ತು. ಭಾನುವಾರ ಅದನ್ನು ಸ್ವಚ್ಛಗೊಳಿಸಿದ ನಂತರ ಅದು ಹಸಿರುಕಲ್ಲಿನಲ್ಲಿ ಕೆತ್ತಿದ ಬ್ರಹ್ಮ ಶಿಲ್ಪ ಎಂಬುದು ಗೊತ್ತಾಯಿತು ಎಂದು ಐಹೊಳೆಯ ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ ತಿಳಿಸಿದರು.
‘ಐಹೊಳೆ ಹಾಗೂ ಪಟ್ಟದಕಲ್ಲಿನಲ್ಲಿ ಲಭ್ಯವಾದ ಮೂರ್ತಿಗಳು ಹಾಗೂ ಅಲ್ಲಿನ ದೇವಸ್ಥಾನಗಳು ಮರಳು ಮಿಶ್ರಿತ ಕೆಂಪು ಕಲ್ಲಿನಿಂದ ಕೂಡಿದ್ದರೆ, ಈಗ ದೊರೆತಿರುವ ಮೂರ್ತಿಯನ್ನು ಹಸಿರುಕಲ್ಲಿನಲ್ಲಿ ಕೆತ್ತಲಾಗಿದೆ. ಈ ಮೂರ್ತಿಯಲ್ಲಿ ಕಿವಿ, ಮೂಗು ಮತ್ತು ಕಿವಿಯೋಲೆ ಎದ್ದು ಕಾಣುತ್ತದೆ. ಅಲಂಕೃತ ಕಿರೀಟವೂ ಇದೆ’ ಎಂದು ಅವರು ತಿಳಿಸಿದರು.