ಹಿರೇಕೆರೂರ: ತಾಲ್ಲೂಕಿನ ಚಿಕ್ಕೇರೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಲ್ಲಾಪುರ ಗ್ರಾಮಸ್ಥರ ನೀರಿನ ಬವಣೆ ನೀಗಿಸಲು ಗ್ರಾಮ ಪಂಚಾಯ್ತಿ ಸದಸ್ಯ ಹಬೀಬ್ ಉಲ್ಲಾ ಪಟ್ಟಣಶೆಟ್ಟಿ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಕೊಳವೆಬಾವಿ ಕೊರೆಯಿಸಿದ್ದಾರೆ.
ಅಂದಾಜು ₹ 1.50 ಲಕ್ಷ ವೆಚ್ಚದಲ್ಲಿ ಕೊರೆಸಿದ ಈ ಕೊಳವೆ ಬಾವಿಯನ್ನು ಮಾಜಿ ಶಾಸಕ ಬಿ.ಸಿ.ಪಾಟೀಲ ಭಾನುವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು. ಹಬೀಬ್ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಬೀಬ್, ‘ಭತ್ತ ಮಾರಿ ಬಂದ ₹ 76 ಸಾವಿರಕ್ಕೆ ಒಂದಿಷ್ಟು ಸಾಲ ಮಾಡಿ ಹಣ ಜೋಡಿಸಿಕೊಂಡು ಕೊಳವೆಬಾವಿ ಕೊರೆಸಿದ್ದೇನೆ. ಜನರ ಸೇವೆಯಲ್ಲಿ ಸಿಗುವ ಖುಷಿ ಬೇರೆ ಕೆಲಸದಲ್ಲಿ ಸಿಗುವುದಿಲ್ಲ’ ಎಂದರು.
ಹಿರೇಕೆರೂರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೊಡ್ಡಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಕಡೇಮನಿ, ತಾ.ಪಂ. ಸದಸ್ಯೆ ಸುಲೋಚನಾ ಶಾಂತನಗೌಡ್ರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಹದೇವಕ್ಕ ಗೊಪಕ್ಕಳ್ಳಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶೋಭಾ ಒಂಟಕರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಪ್ಪ ಹಂಪಣ್ಣನವರ, ಈರಣ್ಣ ಮಳಗೊಂಡರ, ಮಂಜಪ್ಪ ಕಾರಗಿ, ರತ್ನಮ್ಮ ದಾಸರ, ಹೊಳಬಸಪ್ಪ ಗೋಪಕ್ಕಳ್ಳಿ, ಗುತ್ತೆವ್ವ ಬಾರ್ಕಿ, ಮಂಜಮ್ಮ ಬಣಕಾರ, ಇಕ್ಬಾಲ್ ಕಿರವಾಡಿ, ಮುನಾಫ್ ಬಳ್ಳಾರಿ, ಅಮಾನ್ ಸಾಬ್ ಪಟ್ಟಣಶೆಟ್ಟಿ, ಸಾವಿತ್ರಾ ಗೌಡರ, ಶೇಷಣ್ಣ ಚನ್ನಗಿರಿ ಇತರರಿದ್ದರು.
***
ಗ್ರಾಮದ ಜನರು ನನ್ನನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ನೀರಿಲ್ಲದೇ ಅವರು ಅನುಭವಿಸುತ್ತಿರುವ ತೊಂದರೆಯನ್ನು ನೋಡಲಾಗಲಿಲ್ಲ
-ಹಬೀಬ್ ಉಲ್ಲಾ ಪಟ್ಟಣಶೆಟ್ಟಿ
ಗ್ರಾಮ ಪಂಚಾಯ್ತಿ ಸದಸ್ಯ