ಕೊಳ್ಳೇಗಾಲ: ತಾಲ್ಲೂಕಿನ ಶಿವನ ಸಮುದ್ರದ ಮಧ್ಯರಂಗನಾಥ ದೇವಾಲಯದಲ್ಲಿ ಭಾನುವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳು ಸಡಗರದಿಂದ ನಡೆದವು.
ಮಧ್ಯ ರಂಗನಾಥಸ್ವಾಮಿಗೆ 180 ಕೆಜಿ ತೂಕದ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ಆರ್.ನರೇಂದ್ರ, ನರೇಂದ್ರ ಸ್ವಾಮಿ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಜಿ. ಪ್ರಮೋದ್, ಅಪರ ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷ್ಮಿ, ಉಪವಿಭಾಗಾಧಿಕಾರಿ ನಳಿನ್ ಅತುಲ್, ತಹಶೀಲ್ದಾರ್ ಕಾಮಾಕ್ಷಮ್ಮ ಭೇಟಿ ನೀಡಿದ ಪ್ರಮುಖರಲ್ಲಿ ಸೇರಿದ್ದರು.
ಅರ್ಚಕರಾದ ಮಾಧವಭಟ್, ಶ್ರೀಧರ್ ಭಟ್ ತಂಡ ವಿಶೇಷ ಪೂಜೆ ನೆರವೇರಿಸಿದರು. ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ವೈಕುಂಠ ಏಕಾದಶಿ ನಿಮಿತ್ತ ದೇಗುಲವನ್ನು ವರ್ಣಮಯ ವಿದ್ಯುತ್ ದೀಪಗಳು, ಪುಷ್ಪಾಲಂಕಾರ ಮತ್ತು ತಳಿರುತೋರಣಗಳಿಂದ ಸಿಂಗರಿಸ ಲಾಗಿತ್ತು. ಬೆಂಗಳೂರು, ಕನಕಪುರ, ಮಂಡ್ಯ, ಮಳವಳ್ಳಿ, ಮೈಸೂರು, ಚಾಮರಾಜ ನಗರ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಸೀಗನಾಯಕ ಇತರೆ ಇದ್ದರು.