ಚನ್ನಪಟ್ಟಣ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಭಾನುವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲ್ಲೂಕಿನ ನೀಲಕಂಠನಹಳ್ಳಿ ತಿಮ್ಮರಾಯಸ್ವಾಮಿ ದೇವಸ್ಥಾನ, ಮುನಿಯಪ್ಪನದೊಡ್ಡಿ ಚಿಕ್ಕವೈಕುಂಠ ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನ, ತಿಟ್ಟಮಾರನಹಳ್ಳಿ ತಿರುಮಲ ದೇವಸ್ಥಾನ, ಪಟ್ಟಣದ ವರದರಾಜಸ್ವಾಮಿ ದೇವಸ್ಥಾನ, ಮಳೂರು ಅಪ್ರಮೇಯಸ್ವಾಮಿ ದೇವಸ್ಥಾನ, ಬೇವೂರು ಬೆಟ್ಟದ ತಿಮ್ಮಪ್ಪಸ್ವಾಮಿ ದೇವಸ್ಥಾನ, ಅಕ್ಕೂರು ಕೃಷ್ಣ ದೇವಸ್ಥಾನ, ಪಟ್ಟಣದ ಕೋದಂಡ ರಾಮ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರಗಳನ್ನು ಮಾಡಿ, ವೈಕುಂಠ ದ್ವಾರ ದರ್ಶನ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ನೀಲಕಂಠನಹಳ್ಳಿ ತಿಮ್ಮರಾಯಸ್ವಾಮಿ ಲಕ್ಷ್ಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ, ಕರಿಯಪ್ಪನದೊಡ್ಡಿ ಗ್ರಾಮದ ಚಿಕ್ಕವೈಕುಂಠ ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೆಂಕಟರಮಣಸ್ವಾಮಿಗೆ ಅಭಿಷೇಕ ಮಾಡಿ, ವಿವಿಧ ಹೂವುಗಳಿಂದ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದ ಕೋದಂಡರಾಮ ಬಡಾವಣೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯುವಕ ಮಂಡಳಿಯಿಂದ ಇದೇ ಪ್ರಥಮ ಬಾರಿಗೆ ವೈಕುಂಠ ದ್ವಾರ ದರ್ಶನವನ್ನು ಆಯೋಜಿಸಲಾಗಿತ್ತು. ಜೊತೆಗೆ ಪದ್ಮಾವತಿ ಶ್ರೀನಿವಾಸ ದೇವರ ಆಕರ್ಷಕ ವಿಗ್ರಹಗಳ ಮತ್ತು ಅಲಂಕಾರ ಎಲ್ಲರ ಕಣ್ಮನ ಸೆಳೆಯಿತು. ನೂರಾರು ಭಕ್ತರು ವೈಕುಂಠದ್ವಾರ ಪ್ರವೇಶಿಸಿ, ಪ್ರಸಾದ ಸ್ವೀಕರಿಗೆ ದೇವರ ಕೃಪೆಗೆ ಪಾತ್ರರಾದರು.
ಎಲ್ಲಾ ದೇವಸ್ಥಾನಗಳಲ್ಲೂ ನೂರಾರು ಭಕ್ತಾದಿಗಳು ದೇವರ ದರ್ಶನ ಪಡೆದು, ವೈಕುಂಠದ್ವಾರ ಪ್ರವೇಶಿಸಿ, ದೇವರ ಕೃಪೆಗೆ ಪಾತ್ರರಾಗಲು ಸಾಲುಗಟ್ಟಿ ನಿಂತಿದ್ದರು.