ದೇವನಹಳ್ಳಿ: ನಾಳೆ ನಡೆಯಲಿರುವ ತಾಲ್ಲೂಕಿನ ಮೂರು ಕ್ಷೇತ್ರಗಳ ಎಪಿಎಂಸಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಮತದಾನ ಕೇಂದ್ರದಲ್ಲಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಜಿ.ಎ ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ಕಂದಾಯ ಇಲಾಖೆ ಆಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆಗೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಒಟ್ಟು 47 ಮತಗಟ್ಟೆ ವ್ಯಾಪ್ತಿಗಳಲ್ಲಿ 23 ಅತಿ ಸೂಕ್ಷ್ಮ, 16 ಸೂಕ್ಷ್ಮ, 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ ಈಗಾಗಲೇ ಮೂಲಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯದ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ. 23 ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ಜತೆಗೆ ಮೂವರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ.
ಮತ ಪತ್ರದ ಮೂಲಕ ಮತದಾನದ ವ್ಯವಸ್ಥೆ ಇರುವುದರಿಂದ ಎಲೆಕ್ಟ್ರಾನಿಕ್ ಮತಯಂತ್ರ ವ್ಯವಸ್ಥೆ ಇರುವುದಿಲ್ಲ. ಆಕಸ್ಮಿಕವಾಗಿ ಮೂರು ಕ್ಷೇತ್ರದಲ್ಲಿ ಜಮೀನು ಖಾತೆ ಹೊಂದಿರುವ ವ್ಯಕ್ತಿಗೆ ತನ್ನ ಆಸಕ್ತಿಗೆ ಅನುಗುಣವಾಗಿ ಯಾವುದೇ ಒಂದು ಕ್ಷೇತ್ರದಲ್ಲಿ ಮಾತ್ರ ಮತದಾನಕ್ಕೆ ಅವಕಾಶವಿದೆ, ಮತದಾನಕ್ಕೆ ಈಗಾಗಲೇ ಸೂಚಿಸಿರುವಂತೆ ಮೂಲ ಖಾತೆದಾರನಾಗಿರಬೇಕು ಮತ್ತು ಸಂಬಂಧಿಸಿದಂತೆ ಗುರುತಿನ ಚೀಟಿ ಹೊಂದಿರಬೇಕು. ಯಾವುದೇ ಕಾರಣಕ್ಕೆ ಮತದಾರರ ಬುಟ್ಟಿಯಲ್ಲಿ ಸೇರಿಸುವುದಕ್ಕೆ ಮತ್ತು ತೆಗೆದು ಹಾಕುವುದಕ್ಕೆ ಅವಕಾಶವಿಲ್ಲ. ಪಾವತಿ ಆಗಿರುವ ಖಾತೆದಾರರ ಬದಲಿಗೆ ಇತರರು ಮತದಾನ ಮಾಡಿದರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅತಿ ಸೂಕ್ಷ್ಮ, ಸೂಕ್ಷ್ಮ , ಸಾಮಾನ್ಯ ಮತಗಟ್ಟೆ
ಅತಿ ಸೂಕ್ಷ್ಮ: ಬೊಮ್ಮವಾರ 2, ಕೊಯಿರಾ, ಸಾವಕನಹಳ್ಳಿ, ಕಾರಹಳ್ಳಿ 2, ಆವತಿ, ವೆಂಕಟಗಿರಿಕೋಟೆ, ಗೊಡ್ಲು ಮುದ್ದೇನಹಳ್ಳಿ, ಕೋರಮಂಗಲ, ನಲ್ಲೂರು, ಸೋಮತ್ತನಹಳ್ಳಿ, ಬೂದಿಗೆರೆ 1ಮತ್ತು 2, ಅಣ್ಣೇಶ್ವರ, ಕನ್ನಮಂಗಲ, ಸಾದಹಳ್ಳಿ.