ಬಾಗೇಪಲ್ಲಿ: ದೇಶದ ಸಂಸತ್ ಚರ್ಚೆ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಆರೋಗ್ಯಾದಾಯಕ ಚರ್ಚೆಯನ್ನು ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಲ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ನೆರೆ ಹೊರೆಯ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಬಹುತೇಕ ಶಾಸನ ಸಭೆಯ ಅಧಿವೇಶನಗಳು ಕಾಲಹರಣ ಮಾಡುವ ವೇದಿಕೆಗಳಾಗಿ ಮಾರ್ಪಡುತ್ತಿವೆ. ಇದರಿಂದ ರಾಜ್ಯಾಂಗದ ಆಶಯ ಈಡೇರುವುದಿಲ್ಲ. ಜನಸಾಮಾನ್ಯರಿಗೆ ನ್ಯಾಯ ದೊರೆಯುವುದಿಲ್ಲ ಎಂದರು.
ಜನಸಾಮಾನ್ಯರ ತೆರಿಗೆ ಹಣದಿಂದ ಅಧಿವೇಶನಗಳು ನಡೆಯುತ್ತವೆ. ಕೋಟಿಗಟ್ಟಲೆ ಹಣವನ್ನು ಅಧಿವೇಶನಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳ ಸಂಬಳ, ಸಾರಿಗೆ ಹಾಗೂ ವಸತಿಗಾಗಿ ವಿನಿಯೋಗಿಸಲಾಗುತ್ತಿದೆ. ಆದರೆ ಈಚಿನ ದಿನಗಳಲ್ಲಿ ಕೇವಲ ಹಣ ವ್ಯಯ ಆಗುತ್ತಿದೆಯೇ ಹೊರತು ಅದರಿಂದ ಆರೋಗ್ಯದಾಯಕ ಹಾಗೂ ಆಶಾದಾಯಕ ಚಚರ್ೆಗಳು ಪ್ರಾರಂಭವಾಗುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ನಯಾಜ್ ಅಹ್ಮದ್ ಮಾತನಾಡಿ, ಈ ಸೆಮಿಸ್ಟರ್ನಲ್ಲಿಯೇ ವಿದ್ಯಾರ್ಥಿಗಳ ವಿಕಾಸಕ್ಕಾಗಿ ಸ್ಕೌಟ್ ಮತ್ತು ಗೈಡ್ಸ್ ಘಟಕವನ್ನು ಪ್ರಾರಂಭಿಸಲಾಗುವುದು. ಸುಸಜ್ಜಿತವಾದ ವಾಲಿಬಾಲ್ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಆಯಾ ಕ್ರೀಡೆಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಆಸಕ್ತಿ ಇರುವ ಕ್ರೀಡೆಯಲ್ಲಿ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಾಗುವುದು ಎಂದರು.
ಸಾಂಸ್ಕೃತಿಕವಾಗಿ ಬೆಳೆಯುವ ವಿದ್ಯಾರ್ಥಿಗಳಿಗೆ 15 ದಿನಗಳ ನಾಟಕ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುವುದು. ಕಲಾ ಪ್ರಕಾರ ಒಂದರ ತರಬೇತಿಯನ್ನು ನೀಡಿ ಸುಸಜ್ಜಿತ ಕಲಾ ತಂಡ ರಚಿಸಲಾಗುವುದು. ಈ ತಂಡಗಳಿಂದ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಪ್ರಾಧ್ಯಾಪಕರಾದ ಜಿ.ಎಸ್.ಅಶ್ವತ್ಥನಾರಾಯಣ, ಡಾ.ಬಿ.ಎನ್.ಪ್ರಭಾಕರ್, ಪ್ರೊ.ಮೋಹನ್, ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಸೋ.ಸು.ನಾಗೇಂದ್ರನಾಥ್, ಮುನಿರಾಜು ಭಾಗವಹಿಸಿದ್ದರು.