ಶಿರಸಿ: ಬೇಸಿಗೆಯ ಅಂತ್ಯದಲ್ಲಿ ನಡೆಯುತ್ತಿದ್ದ ಗ್ರಾಮೀಣ ಕೆರೆ ಬೇಟೆ ಹಬ್ಬ ಈ ಬಾರಿ ಜನವರಿ ಎರಡನೇ ವಾರದಲ್ಲಿಯೇ ಆರಂಭಗೊಂಡಿದೆ. ಇದು ತಾಲ್ಲೂಕಿನ ಪೂರ್ವ ಭಾಗದ ಜಲಕ್ಷಾಮದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪೂರ್ವ ಭಾಗದ ಬನವಾಸಿ ಹೋಬಳಿಯ ಕಂಡ್ರಾಜಿ, ಹೆಬ್ಬತ್ತಿ, ಕಲಕರಡಿ, ನರೂರು. ರಾಮಾಪುರ, ಕಿರವತ್ತಿ, ದಾಸನಕೊಪ್ಪ, ಬೀಳೂರು, ಮಾಳಂಜಿ, ಕಾಯಗುಡ್ಡೆ ಮೊದಲಾದ ಹಳ್ಳಿಗಳಲ್ಲಿ ಏಪ್ರಿಲ್– ಮೇ ತಿಂಗಳ ವಿಶೇಷ ಸಂಭ್ರಮ ಕೆರೆ ಬೇಟೆ ಹಬ್ಬ. ಪರಸ್ಪರ ಸಾಮರಸ್ಯ ಮೂಡಿಸುವ ಮತ್ಸ್ಯ ಶಿಕಾರಿಯಲ್ಲಿ ಮಾಂಸಾಹಾರಿ ಸಮುದಾಯಗಳ ಎಲ್ಲ ಜನರೂ ಸಡಗರದಿಂದ ಭಾಗವಹಿಸುತ್ತಾರೆ. ಕೆರೆಯಲ್ಲಿ ನೀರಿನ ಸಂಗ್ರಹ ತಳ ಕಾಣುವ ಸಂದರ್ಭ ಆಧರಿಸಿ ಈ ಕೆರೆ ಬೇಟೆ ಹಬ್ಬದ ದಿನಾಂಕ ನಿಗದಿಯಾಗುತ್ತದೆ.
ದನಕರುಗಳು, ಪ್ರಾಣಿ ಪಕ್ಷಿಗಳಿಗೆ ಜಲದಾಹ ನೀಗಿಸುತ್ತಿದ್ದ ಅಂಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲಕರಡಿ ಕೆರೆ ಬೇಸಿಗೆ ಬರುವ ಪೂರ್ವದಲ್ಲೇ ಬಹುತೇಕ ಬತ್ತುವ ಹಂತಕ್ಕೆ ಬಂದಿದೆ. ಈ ಕೆರೆಯಲ್ಲಿ ಬುಧವಾರ ಕೆರೆ ಬೇಟೆ ಹಬ್ಬ ನಡೆಯಿತು. ಕಲಕರಡಿ ಹಾಗೂ ಸುತ್ತಲಿನ ಊರುಗಳು 250ರಷ್ಟು ರೈತರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.
‘ಮುಂಗಾರಿನಲ್ಲಿ ಸರಿಯಾಗಿ ಮಳೆ ಬಿದ್ದಿದ್ದರೆ ಮಾರ್ಚ್ ತಿಂಗಳ ಕೊನೆಯಲ್ಲಿ ಕೆರೆಯಲ್ಲಿ ಮತ್ಸ್ಯ ಬೇಟೆ ನಡೆಯುತ್ತಿತ್ತು. ಈ ಬಾರಿ ಪೂರ್ವ ಭಾಗದಲ್ಲಿ ಮಳೆಯ ಕೊರತೆಯ ಪರಿಣಾಮ ಜನವರಿಯಲ್ಲೇ ಕೆರೆ ಮೈ ಒಣಗಿಸಿದೆ. ಇನ್ನು 15 ದಿನಗಳಲ್ಲಿ ಕೆರೆ ನೀರು ಸಂಪೂರ್ಣ ಬತ್ತುವ ಲಕ್ಷಣಗಳಿವೆ. ಹೀಗಾಗಿ ಮುಂಚಿತವಾಗಿ ಕೆರೆ ಬೇಟೆ ನಡೆಯಿತು. ಇಷ್ಟು ಬೇಗ ಕೆರೆ ಬೇಟೆ ನಡೆಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು’ ಎನ್ನುತ್ತಾರೆ ಯುವಕ ಸಂತೋಷ ಕಲಕರಡಿ.
‘ಪೂರ್ವ ಭಾಗದ ಇನ್ನುಳಿದ ಕೆರೆಗಳಲ್ಲೂ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. ಮೇ ಕೊನೆಯಲ್ಲಿ ಕೆರೆ ಬೇಟೆ ನಡೆಯುತ್ತಿದ್ದ ದೊಡ್ಡ ಕೆರೆಗಳಲ್ಲಿ ಈ ಬಾರಿ ಏಪ್ರಿಲ್ ಕೊನೆಯ ವೇಳೆಗೆ ಹಬ್ಬ ನಡೆಯಬಹುದು. ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಪ್ರತಿ ವಾರ ಒಂದಿಲ್ಲೊಂದು ಕೆರೆಯಲ್ಲಿ ಸಾಮೂಹಿಕ ಮತ್ಸ್ಯ ಶಿಕಾರಿ ನಡೆಯುತ್ತಿತ್ತು. ಈ ಬಾರಿ ಫೆಬ್ರುವರಿಯಿಂದಲೇ ಇದು ಶುರುವಾಗುವ ಸಾಧ್ಯತೆಯಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕೆರೆಯಲ್ಲಿ ನೀರು ಕಡಿಮೆಯಿದ್ದರೂ ಮೀನು ಸಂತತಿ ವೃದ್ಧಿಗೆ ಕೊರತೆಯಾಗಿಲ್ಲ. ಖೂಣಿಗೆ ಭರಪೂರ ಮೀನು ಸಿಕ್ಕಿವೆ. ಆದರೆ ಪೂರ್ವಭಾವಿಯಾಗಿ ನಡೆಸಿದ್ದರಿಂದ ಮೀನಿನ ಗಾತ್ರ ಚಿಕ್ಕದಾಗಿದೆ’ ಎಂದು ಮನೋಹರ ನಾಯ್ಕ ಹೇಳಿದರು. ‘ಕೆರೆ ಬೇಟೆ ಕೇವಲ ಮನರಂಜನೆ ಮಾತ್ರವಲ್ಲ. ಊರಿನ ಅಭಿವೃದ್ಧಿಗೆ ಆದಾಯದ ಮೂಲವೂ ಆಗಿದೆ. ಊರಿನ ಪ್ರತಿ ಮನೆಗೆ ₹ 500 ನಿಗದಿಪಡಿಸಿ ಮೂರು ಖೂಣಿಗಳನ್ನು ನೀಡಲಾಗುತ್ತದೆ. ಅವರು ಅದನ್ನು ಸಂಬಂಧಿಗಳು, ಸ್ನೇಹಿತರು, ಆತ್ಮೀಯರಿಗೆ ನೀಡಬಹುದು. ಖೂಣಿ ಹಾಕುವ ಪರಿಣಿತರಿಗೆ ಅದೃಷ್ಟದೇವಿ ಒಲಿಯುತ್ತಾಳೆ. ಕೆಲವರಿಗೆ 1–2 ಕೆ.ಜಿ ಮೀನು ಸಿಕ್ಕರೆ ಇನ್ನು ಕೆಲವರಿಗೆ 3–4 ಕೆ.ಜಿ ಮೀನು ಸಿಗುತ್ತದೆ’ ಎಂದು ಗ್ರಾಮಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಭಾಕರ ನಾಯ್ಕ ಹೇಳಿದರು.
**
ಕಳೆದ ವರ್ಷ ನಡೆದ ಕೆರೆ ಬೇಟೆ ಹಬ್ಬದಿಂದ ಬಂದ ಆದಾಯ ಊರಿನ ದೇವಾಲಯದ ಅಭಿವೃದ್ಧಿಗೆ ಬಳಕೆಯಾಗಿದೆ
-ಸಂತೋಷ ಕಲಕರಡಿ
ಗ್ರಾಮಸ್ಥ