ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಸುಮಾರು ಹತ್ತು ಆನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಭಯಭೀತಿ ಉಂಟು ಮಾಡಿದ ಘಟನೆ ಬುಧವಾರ ನಡೆದಿದೆ.
ಈ ಆನೆಗಳು ಕೋಡಂಬಹಳ್ಳಿ ಕೆರೆಗೆ ನೀರು ಕುಡಿಯಲು ಬಂದಿರಬಹುದು ಎಂದು ಶಂಕಿಸಲಾಗಿದ್ದು, ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.
ಆನೆಗಳು ಮಂಗಳವಾರದಿಂದ ಇಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಿಗ್ಗೆಯಿಂದಲೇ ಆನೆಗಳನ್ನು ಬೆದರಿಸಿ ಓಡಿಸಲು ಯತ್ನಿಸಿದ್ದಾರೆ. ಬೆದರಿದ ಆನೆಗಳು ಸಿಕ್ಕಸಿಕ್ಕ ಬೆಳೆಗಳು, ಪಂಪ್ ಸೆಟ್ಗಳನ್ನು ಹಾಳುಗೆಡಹಿವೆ.
ಆನೆಗಳ ತುಳಿತದಿಂದ ಬಾಳೆ, ಟೊಮೆಟೊ, ತೆಂಗಿನ ಬೆಳೆ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.
ನಂತರ ಹನಿಯೂರು, ಮಾದೇಗೌಡನದೊಡ್ಡಿ, ಸಾತನೂರು ವ್ಯಾಪ್ತಿ ಕಂಚನಹಳ್ಳಿ ಮುಂತಾದ ಕಡೆ ಓಡಾಡಿವೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಸಂಜೆ ಕಬ್ಬಾಳು ಕಾಡಿಗೆ ಓಡಿಸಿದರು.
ಆನೆಗಳು ನೀರು ಹುಡುಕಿಕೊಂಡು ಕೆರೆಗಳಿಗೆ ಲಗ್ಗೆ ಇಡುತ್ತಿವೆ. ಸದ್ಯ ಇವುಗಳನ್ನು ಕಬ್ಬಾಳು ಅರಣ್ಯ ಪ್ರದೇಶಕ್ಕೆ ಓಡಿಸಿದ್ದು, ಶೀಘ್ರವೇ ಮುತ್ತತ್ತಿ ಕಾಡಿಗೆ ಓಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ವನಪಾಲಕ ಕುಮಾರ್ ತಿಳಿಸಿದ್ದಾರೆ.