ಚಾಮರಾಜನಗರ: ಜಿಲ್ಲೆಯ ಚಾಮರಾಜ ನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ಶಾಂತಿಯುತ ಮತದಾನ ನಡೆಯಿತು.
ಜಮೀನಿನ ಖಾತೆ ಹೊಂದಿರುವ ಮತದಾರರು ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. ಕೆಲವೆಡೆ ಉತ್ಸಾಹದಿಂದ ಮತ ಚಲಾಯಿಸಿದರು.
ಸಂಸದ ಆರ್.ಧ್ರುವನಾರಾಯಣ ಅವರು ಹೆಗ್ಗವಾಡಿ ಗ್ರಾಮದ ಮತಗಟ್ಟೆ ಯಲ್ಲಿ ಮತ ಚಲಾಯಿಸಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಆಲೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಚಾಮರಾಜನಗರ ಎಪಿಎಂಸಿಯಲ್ಲಿ 14 ಸ್ಥಾನಗಳಿವೆ. ಈ ಪೈಕಿ ಕೃಷಿ ಉತ್ಪನ್ನ ಸಹಕಾರ ಸಂಘ ಮತ್ತು ಕೃಷಿ ಸಂಸ್ಕರಣಾ ಸಹಕಾರ ಸಂಘದ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದೆ. 12 ಸ್ಥಾನಕ್ಕೆ 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗುಂಡ್ಲುಪೇಟೆ ಎಪಿಎಂಸಿಯಲ್ಲಿ 13 ಸ್ಥಾನಗಳಿವೆ. ಈ ಪೈಕಿ ಕೃಷಿ ಉತ್ಪನ್ನ ಸಹಕಾರ ಸಂಘದ ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 12 ಸ್ಥಾನಕ್ಕೆ 27 ಆಕಾಂಕ್ಷಿ ಗಳು ಕಣದಲ್ಲಿ ದ್ದಾರೆ. ಚಾಮರಾಜನಗರ ಎಪಿಎಂಸಿಯ ಮತ ಎಣಿಕೆ ಪ್ರಕ್ರಿಯೆಯು ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜು ಮತ್ತು ಗುಂಡ್ಲುಪೇಟೆ ಎಪಿಎಂಸಿಯ ಮತ ಎಣಿಕೆ ಪ್ರಕ್ರಿಯೆಯು ಜೆಎಸ್ಎಸ್ ಕಾಲೇಜಿನಲ್ಲಿ ಜ. 14ರಂದು ಬೆಳಿಗ್ಗೆ 8ಗಂಟೆಗೆ ಆರಂಭವಾಗಲಿದೆ.
**
ತಪ್ಪಿದ ಭಾರಿ ಅನಾಹುತ
ಚಾಮರಾಜನಗರ: ನಗರದ ಜಿಲ್ಲಾ ನ್ಯಾಯಾಲಯ ಸಮೀಪದ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಏಜೆನ್ಸಿಯ ದಾಸ್ತಾನು ಮಳಿಗೆಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ ಘಟನೆ ಗುರುವಾರ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹಾಗಾಗಿ, ಭಾರೀ ಅನಾಹುತ ತಪ್ಪಿತು. ದಾಸ್ತಾನು ಮಳಿಗೆಯಲ್ಲಿದ್ದ ಹೊಸ ಸ್ಟೌಗಳು ಸೇರಿದಂತೆ ಇತರೇ ಸಾಮಗ್ರಿ ಭಸ್ಮವಾಗಿವೆ.