ಕೋಲಾರ: ‘ಸಮಾಜದಲ್ಲಿ ಅಪರಾಧ ಇಳಿಕೆಯಾದರೆ ಭಾರತ ರಾಮ ರಾಜ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಆರ್ಥಿಕ ನೀತಿ ಇನ್ಸಿಟ್ಯೂಟ್ನ ಸಲಹೆಗಾರ ಕೆ.ಕೆ.ಶರ್ಮ ಅಭಿಪ್ರಾಯಪಟ್ಟರು.
ನಗರದ ಗೋಕುಲ್ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು.
‘ಅಪರಾಧ ಇಳಿಮುಖವಾಗಿದ್ದರೆ ಏನೆಲ್ಲಾ ಕಸರತ್ತು ಮಾಡಿದರೂ ವಿಜ್ಞಾನ, ತಂತ್ರಜ್ಞಾನದ ಲಾಭ ಸಮಾಜಕ್ಕೆ ಲಭಿಸದೆ ಮಾರಕವಾಗಿ ಪರಿಣಮಿಸುತ್ತದೆ. ಯುವಜನತೆ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ’ ಎಂದರು.
‘ದೇಶದ ಶೇ 60ಕ್ಕೂ ಹೆಚ್ಚು ಯುವ ಸಮುದಾಯವಿದೆ. ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆಶಯಗಳನ್ನು ಪಾಲಿಸುವ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ. ಯಾವುದೇ ಕಾರಣಕ್ಕೂ ದೇಶದ ಆಸ್ತಿಯನ್ನು ನಾಶಪಡಿಸುವ ಮೂಲಕ ಕೋಪಾತಾಪ ಪ್ರದರ್ಶನ ಮಾಡುವುದು ಸರಿಯಲ್ಲ’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಸಮಾಜದಲ್ಲಿ ಕಾನೂನನ್ನು ಗೌರವಿಸುವ ಮನೋಭಾವನನ್ನು ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ನಂತರ ವೃತ್ತಿ ಜೀವನದ ಗುರಿಯನ್ನು ಸಾಧಿಸಲು ಮುಂದಾದಾಗ ಕೆಲ ಆಡೆತಡೆಗಳು ಸಹಜವಾದರೂ ನಿರಂತರ ಪ್ರಯತ್ನಗಳಿಂದ ಯಶಸ್ಸು ಪಡೆದುಕೊಂಡು ಜೀವನದಲ್ಲಿ ನೆಮ್ಮದಿ ಕಾಣುವುದರೊಂದಿಗೆ ದೇಶದ ಅಭಿವೃದ್ಧಿ ಹೊಂದಲು ಸಹಕರಿಸಬೇಕು’ ಎಂದು
‘ಯುವಕರು ದೇಶದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಆಗ ಮಾತ್ರ ಮುಂದುವರೆದ ರಾಷ್ಟ್ರದ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಸರಕಾರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವಿನಿಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಯುವಶಕ್ತಿ ಯೋಜನೆಗಳನ್ನು ಸದುಪಯೋಗಿಸಿಕೊಂಡು ಉದ್ದಿಮೆದಾರರಾ ಉದ್ಯೋಗ ಸೃಷ್ಠಿ ಮಾಡಬೇಕು’ ಎಂದು ತಿಳಿಸಿದರು.
ಗೋಕುಲ್ ಕಾಲೇಜಿನ ಪ್ರಾಂಶುಪಾಲ ಡಾ.ವಿ.ನಾಗರಾಜ್, ನಿರ್ದೇಶಕ ಸಿ.ಎನ್.ಶ್ರೀನಿವಾಸ್, ಗೋಕುಲ್ ಕಾಲೇಜಿನ ಅಧ್ಯಕ್ಷೆ ಯಶೋಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.