ವನಜಾಕ್ಷಿ ಶ್ರೀಪತಿ ಭಟ್ ವೇದಿಕೆ (ಮೂಡುಬಿದಿರೆ):ನಾವೆಲ್ಲ ವಿಶ್ವಮಾನ ವರಾಗಬೇಕು. ವಿದೇಶಕ್ಕೆ ಹೋದರೆ, ದೇಶದಲ್ಲಿ ದೊಡ್ಡ ಹುದ್ದೆಗೇರಿದರೆ ಅಥವಾ ಉನ್ನತ ಪ್ರಶಸ್ತಿಗಳನ್ನು ಪಡ ಕೊಂಡರೆ ವಿಶ್ವಮಾನವರೆನಿಸುವುದಿಲ್ಲ. ನಮ್ಮ ಹೃದಯ ವೈಶಾಲ್ಯತೆಯಿಂದ ಹಾಗೂ ನಾವೆಲ್ಲ ಒಂದೇ ಎಂಬ ಐಕ್ಯತೆಯ ಭಾವನೆ ಮೂಡಿದಾಗ ಮಾತ್ರ ಅದು ಸಾಧ್ಯ. ಧರ್ಮದ ಸಂದೇಶ ಕೂಡ ಅದನ್ನೆ ಸಾರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪುತ್ತಿಗೆಯ ವಿವೇಕಾನಂದ ನಗರದಲ್ಲಿ ಮೂರು ದಿನ ನಡೆಯುವ 23ನೇ ವರ್ಷದ ಆಳ್ವಾಸ್ ವಿರಾಸತ್ 2017 ಅನ್ನು ಅವರು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ನೆಲ, ಜಲ ಸಂಪತ್ತು ಯುವಜನ ತೆಯ ಬಳುವಳಿ. ಅದನ್ನು ಶುದ್ಧವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿ ಸುವುದು ನಮ್ಮೆಲ್ಲರ ಜವಾಬ್ದಾರಿ. ಶಿಕ್ಷಣ ಎಂಬುದು ಜ್ಞಾನದಿಂದ ಪರಿವರ್ತನೆ ಯಾಗಬೇಕೆ ಹೊರತು ಭಯ ಅಥವಾ ಶಿಕ್ಷೆಯಿಂದಲ್ಲ. ಕಲ್ಲನ್ನು ಕೆತ್ತಿ ರೂಪ ಕೊಟ್ಟರೆ ಸಾಲದು. ಅದನ್ನು ಗುಡಿಯೊಳಗಿಟ್ಟು ಪೂಜಿಸಿದಾಗ ಮಾತ್ರ ಜೀವಂತಿಕೆ ಬರುತ್ತದೆ, ಸಾನಿಧ್ಯ ವೃದ್ಧಿಯಾಗುತ್ತದೆ. ಬದುಕಿನ ಪರೀಕ್ಷೆ ಯಲ್ಲಿ ಯಶಸ್ಸು ಪಡೆಯಬೇಕಾದರೆ ಸಂಸ್ಕಾರ, ಛಲ ಹಾಗೂ ಸಾಧನೆ ಬೇಕು. ಶಿಕ್ಷಣದ ಜತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಸ್ತನ್ನು ಕಲಿಸಿಕೊಡುವ ಮೂಲಕ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ ಎಂಬಂತೆ ತೋರಿಸಿಕೊಟ್ಟ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಜೀವನದ ಪಾಠ ನೀಡುತ್ತಿದೆ. ಶಿಸ್ತು ವಿದ್ಯಾರ್ಥಿಗಳಿಗೆ ಅಸಹ್ಯ ಎನಿಸಿಕೊಂಡರೂ ಭವಿಷ್ಯದಲ್ಲಿ ಸುಂದರ ಬದುಕು ರೂಪಿಸಿಕೊಳ್ಳಲು ಶಿಸ್ತು ಅಗತ್ಯವಾಗುತ್ತದೆ ಎಂದರು.
ಇದೇ ಸಂದರ್ಭ ಪ್ರಸಿದ್ಧ ಭರತನಾಟ್ಯ ಕಲಾವಿದ ಪದ್ಮಭೂಷಣ ವಿ.ಪಿ ಧನಂಜಯನ್ ಅವರಿಗೆ ಆಳ್ವಾಸ್ ವಿರಾಸತ್ 2017 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಪದ್ಮನಾಭ ಅಭಿನಂದನಾ ಪತ್ರ ವಾಚಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಕೆನರಾ ಬ್ಯಾಂಕ್ ಅಧಿಕಾರಿ ವಿರೂಪಾಕ್ಷ, ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ವ್ಯವಸ್ಥಾಪಕ ಜಯರಾಂ ಭಟ್, ಯುಪಿಸಿಎಲ್ ಕಾರ್ಯನಿ ರ್ವಹಣಾ ಅಧಿಕಾರಿ ಕಿಶೋರ್ ಆಳ್ವ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಕೆ. ಶ್ರೀಪತಿ ಭಟ್, ದೇವಿಪ್ರಸಾದ್ ಶೆಟ್ಟಿ, ಮುಸ್ತಾಫ.ಎಂ, ಜಯಶ್ರೀ ಅಮರನಾಥ ಶೆಟ್ಟಿ, ತೇಜಸ್ವಿನಿ ಅನಂತ ಕುಮಾರ್, ಅಮೆರಿಕಾದ ರೋನ್ ಸೋಮನ್ಸ್, ಉದ್ಯಮಿ ವರುಣ್ ಜೈನ್ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸ್ವಾಗತಿಸಿದರು. ಉಪನ್ಯಾಸಕಿ ದೀಪಾ ರತ್ನಾಕರ್ ನಿರೂಪಿಸಿದರು.
**
ಮೋಹನ ಆಳ್ವರಿಗೆ ನನ್ನ ಆಶೀರ್ವಾದ ಇದೆ ಎನ್ನುವುದಕ್ಕಿಂತಲೂ ಅವರು ನನ್ನ ಶಿಷ್ಯ ಎನ್ನುವುದು ನನಗೆ ಹೆಮ್ಮೆಯ ವಿಚಾರ
ಡಿ.ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿ
*
-ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು