ಹೊಸದುರ್ಗ: ‘ಕೆಲವು ವೈದ್ಯರು ಹಾಗೂ ಡಯಾಗ್ನಿಸ್ಟಿಕ್ ಕೇಂದ್ರಗಳ ಸಿಬ್ಬಂದಿ ಗರ್ಭಿಣಿಯರ ಸ್ಕ್ಯಾನಿಂಗ್ ಸಂದರ್ಭದಲ್ಲಿ ಗಂಡಿದ್ದರೆ ಈಶ್ವರ, ಹೆಣ್ಣಿದ್ದರೆ ಪಾರ್ವತಿಯ ಚಿತ್ರವನ್ನು ತೋರಿಸು ತ್ತಿದ್ದಾರೆ’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ದಿಂಡಲ್ ಕೊಪ್ಪ ದೂರಿದರು.
ಪಟ್ಟಣದ ವಿಜಯ ಸಂಗಮ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋ ಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ, ಮಾದಕ ವಸ್ತುಗಳ ಸೇವನೆ, ದುಷ್ಪರಿಣಾಮ ಮತ್ತು ನಿರ್ಮೂಲನೆ ಹಾಗೂ ಭ್ರೂಣ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಭ್ರೂಣ ಲಿಂಗಪತ್ತೆ ಅಪರಾಧ ವಾಗಿದ್ದರೂ ಅಲ್ಲಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ. ಭ್ರೂಣ ಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಯಲು ಕಾಯ್ದೆಗಳು ಜಾರಿಗೆ ಬಂದಿವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.
‘ಶಾಲಾ ಕಾಲೇಜುಗಳ ಸಮೀಪ ಮಾದಕವಸ್ತು ಹಾಗೂ ಮದ್ಯ ಮಾರಾಟ ಮಾಡುವ ಜಾಲಗಳು ಹೆಚ್ಚುತ್ತಿವೆ. ಪಾನ್, ಗುಟ್ಕಾ ಹಾಗೂ ಮದ್ಯ ಸೇವಿಸುವುದರಿಂದ ಆರೋಗ್ಯ ಹಾಳಾ ಗುತ್ತದೆ. ಇಂಥ ದುರಭ್ಯಾಸದಿಂದ ಕುಟುಂಬವೂ ಬೀದಿಪಾಲಾಗುತ್ತದೆ’ ಎಂದರು.
‘ಸ್ವಾಮಿ ವಿವೇಕಾನಂದರಿಗೆ ಏಕಾಗ್ರತೆಯ ಶಕ್ತಿ ಉತ್ತಮವಾಗಿ ಇದ್ದಿದ್ದರಿಂದ ಶ್ರೇಷ್ಠ ಸಾಧಕರಾದರು. ಯುವಜನಾಂಗ ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿವೇಕಾನಂದರಂತೆ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು’ ಎಂದರು.
ಪಟ್ಟಣದ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಜಿ.ದಿನೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ.ಶ್ರೀಕಾಂತ್, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಟಿ.ರಮೇಶ್, ಡಾ.ರಾಘವೇಂದ್ರ ಪ್ರಸಾದ್ ಮಾತ ನಾಡಿದರು. ಎಸ್ವಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಂ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಬೆಲಗೂರು ಸಮುದಾಯ ಆರೋಗ್ಯ ಕೇಂದ್ರ ಡಾ.ಕವಿತಾ ‘ಭ್ರೂಣ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ’ ಕಾಯ್ದೆ ಕುರಿತು ಚಿತ್ರದುರ್ಗದ ಕುಷ್ಠರೋಗ ವಿಭಾಗದ ಮನೋಶಾಸ್ತ್ರಜ್ಞ ಡಾ.ಮಂಜು ನಾಥ್ ‘ಮಾದಕ ವಸ್ತುಗಳ ಸೇವನೆ, ದುಷ್ಪರಿಣಾಮ ಹಾಗೂ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.
ಎಸ್ವಿಎಸ್ ವಿದ್ಯಾಸಂಸ್ಥೆ ಪ್ರಾಂಶುಪಾಲ ವೆಂಕಟೇಶ್, ಅಧ್ಯಾಪಕರು ಹಾಜರಿದ್ದರು.