ರಿಪ್ಪನ್ಪೇಟೆ: ಕೇಂದ್ರ ಸರ್ಕಾರ ₹1000 ಹಾಗೂ ₹ 500 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿದ ಕ್ರಮದ ಕುರಿತು ಜಾಗೃತಿಗೆ ಸಮೀಪದ ಹೆದ್ದಾರಿಪುರದಲ್ಲಿ ಶುಕ್ರವಾರ ಬೀದಿ ನಾಟಕ ಪ್ರದರ್ಶಿಸಲಾಯಿತು.
‘ನಗದು ರಹಿತ ವ್ಯವಹಾರ, ಜನಧನದ ಮೂಲಕ ಶೂನ್ಯ ಖಾತೆ ತೆರೆದು ಬ್ಯಾಂಕ್ ಮತ್ತು ಅಂಗಡಿ ಇನ್ನಿತರ ವ್ಯವಹಾರ, ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆ, ಎಟಿಎಂ ಮೂಲಕ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸುವುದು ಬೀದಿ ನಾಟಕದ ಉದ್ದೇಶ’ಎಂದು ಹೆದ್ದಾರಿಪುರ ಕೃಷ್ಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಮಮೊಯ್ಲಿ ಹೇಳಿದರು.
ಸಮೀಪದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪ್ರಗತಿ ಕೃಷ್ಣ ಬ್ಯಾಂಕ್ ಮತ್ತು ಶಿವಮೊಗ್ಗ ಮಲೆನಾಡು ಕಲಾತಂಡದ ಸಹಯೋಗದಲ್ಲಿ ಮಸರೂರು ಗಣೇಶ್ ರಚಿಸಿ, ನಿರ್ದೇಶಿಸಿದ, ‘ರೈತನ ನಡೆ ಬ್ಯಾಂಕಿನ ಕಡೆ’ ಎಂಬ ಬೀದಿ ನಾಟಕ ಪ್ರದರ್ಶನ ಏರ್ಪಡಿಸಲಾಯಿತು.
ಇದೇವೇಳೆ ರಾಮಮೊಯ್ಲಿ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಗ್ರಾಮದ ಹಿರಿಯ ನಾಗರಿಕ ಬಿಳಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಶಿವಮೊಗ್ಗ ಪ್ರಗತಿ ಕೃಷ್ಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ಪಿ.ಶೆಟ್ಟಿ, ತಳಲೆ ಸಹಕಾರ ಬ್ಯಾಂಕ್ ನಿರ್ದೇಶಕ ತೊರೆಗದ್ದೆ ಲೋಕಪ್ಪಗೌಡ, ಮುಖ್ಯೋಪಾದ್ಯಾಯ ಸುರೇಶ್, ತೇಜಮೂರ್ತಿ, ಶಿವಮೊಗ್ಗ ಮಲೆನಾಡು ಕಲಾತಂಡದ ಮುಖ್ಯಸ್ಥ ಗಣೇಶ್ ಮಸರೂರು, ಪ್ರೌಢಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು.
ಕಾವ್ಯಾ ಪ್ರಾರ್ಥಿಸಿದರು. ಬ್ಯಾಂಕ್ ಅಧಿಕಾರಿ ಟೂಕಪ್ಪ ಸ್ವಾಗತಿಸಿದರು, ಗಣೇಶ್ ವಂದಿಸಿದರು.