ಗೋವೆಯ ಭವಿಷ್ಯ ಇತ್ಯರ್ಥಕ್ಕೆ ಇಂದು ಜನಮತ ಸಂಗ್ರಹ
ಪಣಜಿ, ಜ. 15– ಗೋವೆಯು ಮಹಾರಾಷ್ಟ್ರದಲ್ಲಿ ವಿಲೀನವಾಗಬೇಕೆ ಅಥವಾ ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿಯಬೇಕೆ ಎಂಬುದನ್ನು ನಿರ್ಧರಿಸಲು ನಾಳೆ ಗೋವೆಯಲ್ಲಿ ಜನಮತ ಸಂಗ್ರಹ ನಡೆಯಲಿದೆ.
ಮಾವೋಗೆ ವಿಜಯ ಖಚಿತ ಎಂದು ಚೌಎನ್– ಲಾಯ್
ಹಾಂಕಾಂಗ್, ಜ. 15– ಚೀನಾದಾದ್ಯಂತ ಪ್ರಾರಂಭವಾಗಿರುವ ಶ್ರಮಜೀವಿ ಸಾಂಸ್ಕೃತಿಕ ಕ್ರಾಂತಿಯ ಫಲವಾಗಿ ಈಗ ನಡೆಯುತ್ತಿರುವ ‘ತೀವ್ರ ರೀತಿಯ ವರ್ಗ ಹೋರಾಟ’ದಲ್ಲಿ ಅಧ್ಯಕ್ಷ ಮಾವೋ ತ್ಸೆತುಂಗ್ರ ವಿಚಾರಧಾರೆಗೆ ವಿಜಯ ಖಚಿತವೆಂದು ಚೀನಿ ಪ್ರಧಾನಿ ಚೌ ಎನ್– ಲಾಯ್ ನಿನ್ನೆ ರಾತ್ರಿ ಇಲ್ಲಿ ತಿಳಿಸಿದರು.
ಸೇನೆಯಲ್ಲಿ ಒಡಕು ತರಲು
ಎಡಕಮ್ಯುನಿಸ್ಟರ ಯತ್ನ: ಇಂದಿರಾ ಗಾಂಧಿ ಆಪಾದನೆ
ಕಲ್ಲಿಕೋಟೆ, ಜ. 15– ನಮ್ಮ ಸಶಸ್ತ್ರ ಸೈನ್ಯದಲ್ಲಿ ಒಡಕನ್ನುಂಟುಮಾಡಲು ಕಮ್ಯುನಿಸ್್ಟ ಪಕ್ಷವು (ಮಾರ್ಕ್ಸ್ ವಾದಿಗಳು) ಪ್ರಯತ್ನಿಸುತ್ತಿದೆಯೆಂದು ಪ್ರಧಾನಿ ಇಂದಿರಾ ಗಾಂಧಿ ಅವರು ನಿನ್ನೆ ಆಪಾದಿಸಿದರು. ಎಡಕಮ್ಯುನಿಸ್ಟ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯ ವಿಷಯವೇ ಪ್ರಧಾನಿ ಅವರ ಈ ಆಪಾದನೆಗೆ ಆಧಾರ.
ಎಂ.ಜಿ.ಆರ್. ಮತ್ತು ಎಂ.ಆರ್. ರಾಧ ಗುಣಮುಖ
ಮದ್ರಾಸ್, ಜ. 15– ಕಳೆದ ಗುರುವಾರ ಗುಂಡೇಟಿನ ಪ್ರಕರಣವೊಂದರಲ್ಲಿ ಗಾಯಗೊಂಡಿದ್ದ ಚಲನಚಿತ್ರ ಕಲಾವಿದರಾದ ಎಂ.ಜಿ. ರಾಮಚಂದ್ರನ್ ಮತ್ತು ಎಂ.ಆರ್. ರಾಧ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಶ್ರೀ ಎಂ.ಜಿ. ರಾಮಚಂದ್ರನ್ ಅವರು ಇಂದು ಬೆಳಿಗ್ಗೆ ತಮ್ಮ ಕೋಣೆಯಲ್ಲಿ ತಿರುಗಾಡುತ್ತಿದ್ದರೆಂದೂ, ಸಂದರ್ಶಕರೊಡನೆ ಮಾತನಾಡಬಾರದೆಂದು ಅವರಿಗೆ ತಿಳಿಸಲಾಗಿದೆಯೆಂದೂ ಅವರಿಗೆ ಚಿಕಿತ್ಸೆ ಮಾಡುತ್ತಿರುವ ವೈದ್ಯರು ತಿಳಿಸಿದ್ದಾರೆ.