ನಾಗಮಂಗಲ: ‘ಆಂಗ್ಲ ಭಾಷೆ ಕೇವಲ ವ್ಯವಹಾರಕ್ಕಷ್ಟೆ ಸೀಮಿತ ಆಗಿರಬೇಕು. ಸಂಸ್ಕಾರಕ್ಕಾಗಿ ಆಂಗ್ಲ ಭಾಷೆ ಅನುಕರಣೆ ವಿಷಾದನೀಯ’ ಎಂದು ಶಿವಮೊಗ್ಗ ಜಿಲ್ಲೆಯ ಯುವ ಕವಯತ್ರಿ ಭಾವನಾ ವಿಷಾದಿಸಿದರು.
ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿ ಮಹಾಸಂ ಸ್ಥಾನ ಮಠ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 4ನೇ ವರ್ಷದ ಸಂಸ್ಮರಣೆ, ಹಾಗೂ 72 ನೇ ಜಯಂತ್ಯುತ್ಸವದ ನಿಮಿತ್ತ ಭಾನು ವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಭಾಷೆ ಜೀವನದ ಭಾಷೆ ಆಗಬಾರದು. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು ಎಂದು ಸಲಹೆ ಮಾಡಿದರು.
ಸಂಸ್ಕಾರ, ಸಾಹಿತ್ಯದಿಂದ ನಾವು ಧೀಮಂತ ವ್ಯಕ್ತಿಗಳಾಗುತ್ತೇವೆ. ಮಕ್ಕಳು ಅಜ್ಜ ಹಾಗೂ ಅಜ್ಜಿಯರೊಂದಿಗೆ ಬೆಳೆದಾಗ ಉತ್ತಮ ಸಂಸ್ಕಾರ ಕಲಿಯುತ್ತವೆ. ಮಕ್ಕಳ ಮೇಲೆ ನಂಬಿಕೆ ಇರಬೇಕು. ಅಪ್ಪ ಅಮ್ಮಂದಿರು ಮಕ್ಕಳನ್ನು ಅತಿ ಪ್ರೀತಿಯಿಂದ ಹಾಗೂ ಅತಿ ಭಯದಿಂದಲೂ ಬೆಳೆಸಬಾರದು ಎಂದು ತಿಳಿಸಿದರು.
ಸಾನಿಧ್ಯ ವಹಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಬಸವಣ್ಣ, ಗಾಂಧಿ, ಅಂಬೇಡ್ಕರ್, ಕುವೆಂಪು ಹಾಗೂ ಇತರ ಮಹನೀಯರ ಮೌಲ್ಯ, ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಟ್ರಸ್ಟ್ನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಸಾಹಿತಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ಡಾ.ಬಿ.ಆರ್. ಲಕ್ಷ್ಮಣರಾವ್, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಅಧ್ಯಕ್ಷ ಮಂಜುನಾಥಗೌಡ ಇದ್ದರು.
ಕನ್ನಡಮ್ಮನ ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವಿಗೋಷ್ಠಿ, ಚರ್ಚೆ, ಹನಿಗವನ ವಾಚನ ಕಾರ್ಯಕ್ರಮಗಳು ನಡೆದವು.