ಮುಳಬಾಗಿಲು: ತಾಲ್ಲೂಕಿನ ಕೆಲವು ಕಡೆ ಮಾವಿನ ತೋಟಗಳಲ್ಲಿ ಕಾಲಾವಧಿಗೆ ಮುಂಚಿತವಾಗಿಯೇ ಮಾವಿನ ಕಾಯಿ ಬಿಟ್ಟಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಡಿಸೆಂಬರ್– ಜನವರಿ ತಿಂಗಳಿನಲ್ಲಿ ಮಾವು ಹೂ ಬಿಡುವುದು ವಾಡಿಕೆ. ಆದರೆ, ಈ ವರ್ಷ ಮುಂಚಿತವಾಗಿಯೇ ಒಂದು ಕಡೆ ಹೂ ಕಂಡರೆ ಮತ್ತೆ ಅದೇ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ. ಇದು ಮುಂದಿನ ಫಸಲಿಗೆ ತೊಂದರೆ ಆಗಬಹುದು ಎಂಬ ಭಯ ಮಾವು ಬೆಳೆಗಾರರಿಗೆ ಕಾಡುತ್ತಿದೆ ಎಂದು ಮಾವು ಬೆಳೆಗಾರ ಮಿಟ್ಟಹಳ್ಳಿ ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಾದ್ಯಂತ ಮಾವಿನ ತೋಪುಗಳಲ್ಲಿ ಈ ಬಾರಿ ಹೂ ಚೆನ್ನಾಗಿ ಬಿಟ್ಟಿದೆ. ಹೂ ಬಿಡುವ ಮುನ್ನ ಮತ್ತು ಹೂ ಬಿಟ್ಟ ನಂತರ ಮಾವಿನ ಗಿಡ, ಮರಗಳಿಗೆ ಔಷಧಿಯನ್ನು ಸಿಂಪಡಿಸಲಾಗಿ. ಈ ವರ್ಷ ಫಸಲು ಚೆನ್ನಾಗಿರುವುದರಿಂದ ಹೆಚ್ಚಿನ ಆದಾಯ ಕೈ ಸೇರುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
ಮಾವಿನ ತೋಟದಲ್ಲಿ ಕಳೆ, ಗಿಡಗಂಟಿ, ಕಸ ತೆಗೆದು ಸ್ವಚ್ಛತೆ ಮಾಡಲಾಗಿದೆ. ಮರಗಳ ಬುಡದಲ್ಲಿ ನೀರು ಇಂಗುವ ಗುಂಡಿಗಳನ್ನು ಅಗೆದು ಗೊಬ್ಬರ ಔಷಧಿ ಸಿಂಪಡಿಸಲಾಗಿದೆ.
‘ಕೆಲವು ಮಾವಿನ ಮರಗಳಲ್ಲಿ ಅಕಾಲಿಕ ಫಸಲು ಬರುವ ಸಾಧ್ಯತೆಗಳು ಸಾಕಷ್ಟಿವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಶಿವಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.