ಮಡಿಕೇರಿ: ಜಿಲ್ಲೆಯ ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳಿಗೆ ಆಚಾರ– ವಿಚಾರವನ್ನು ಕಲಿಸಲು ವೇದಿಕೆ ಕಲ್ಪಿಸಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟದ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಕೂಲ್ನಲ್ಲಿ ನಡೆದ ಮೂರನೇ ವರ್ಷದ ಕುಂಞಯಡ ಕೊಡವ ಜನಪದ ಸಾಂಸ್ಕೃತಿಕ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರು ಕೂಡ ಹೆಚ್ಚಿನ ಮುತುವರ್ಜಿ ವಹಿಸಬೇಕು. ಹಾಗಾದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಇಂತಹ ಕುಂಞಿ ಮಕ್ಕಡ ನಮ್ಮೆಯನ್ನು ನಡೆಸುತ್ತಾ ಬರುತ್ತಿದ್ದು, ಜೊತೆಗೆ ಹಲವು ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ ಅಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನ ಬಸವ ಸಮಿತಿ ಪ್ರಕಟಿತ ವಚನ ಕೊಡವಾನುವಾದ ಪುಸ್ತಕ ಹಾಗೂ ಮೊಣ್ಣಂಡ ಶೋಭಾ ಸುಬ್ಬಯ್ಯ ಸಾಹಿತ್ಯ ರಚನೆಯ ಕೊಡವ ಕೀರ್ತನ ಮಾಲೆ ಶಾಸ್ತ್ರೀಯ ಪಾಟ್ ಸಿ.ಡಿ, ತೆಳ್ಂಗ್ನ ಕಾವೇರಿ ನಾಟಕ ಕೃತಿ ಹಾಗೂ ಕುಡಿಕಾರ ನಾಟಕ ಕೃತಿ, ನಂಗಕೊಡವ ಭಾಗ– -2 ಸಿ.ಡಿ ಬಿಡುಗಡೆ ಮಾಡಲಾಯಿತು.
ವಚನ ಅನುವಾದ ಮಾಡಿದ ತೀತರ ರೇಖಾ ವಸಂತ್, ನಾಗೇಶ್ ಕಾಲೂರ್, ಮುಲ್ಲೇಂಗಡ ರೇವತಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣನ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿಯ ವತಿಯಿಂದ ಭಾರ ತೀಯ ವಿದ್ಯಾಭವನ, ಮೂರ್ನಾಡ್ ಕೊಡವ ಸಮಾಜ, ಕೊಯವ ಸಮಾಜ, ಅಮ್ಮತ್ತಿ ಕೊಡವ ಸಮಾಜ, ಬೆಂಗಳೂರಿನ ಮತ್ತಿ ಕೆರೆ ಕೊಡವ ಸಮಾಜಗಳಿಗೆ ಕೊಡವ ಸಂಸ್ಕ್ರತಿಯ ದುಡಿಯನ್ನು ವಿತರಿಸಲಾಯಿತು.
ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ಮಣವಟ್ಟಿರ ಈ. ಚಿಣ್ಣಪ್ಪ, ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಪಿ. ರೇಖಾವಸಂತ್, ಬೊಳ್ಳಜಿರ ಬಿ. ಅಯ್ಯಪ್ಪ, ಮಾದೇಟಿರ ಬೆಳ್ಯಪ್ಪ ಇದ್ದರು.