ಯಲ್ಲಾಪುರ: ಸಂಕ್ರಾಂತಿಯ ಪರ್ವ ಕಾರ್ಯದಲ್ಲಿ ದೇಸೀಯ ಕ್ರೀಡೆ ಏರ್ಪಡಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಮಕ್ಕಳಲ್ಲಿ ಉತ್ಸಾಹ ತುಂಬುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ಸೋಲು ಗೆಲುವು ಮುಖ್ಯವಲ್ಲ. ಗಾಳಿಪಟದ ಹಾಗೇ ಪ್ರತಿಯೊಬ್ಬ ಮಕ್ಕಳೂ ಜೀವನದಲ್ಲಿ ಎತ್ತರಕ್ಕೆ ಏರಲಿ ಎಂದು ತಹಶೀಲ್ದಾರ್ ಡಿ.ಜಿ.ಹೆಗಡೆ ಹೇಳಿದರು.
ಮಕರ ಸಂಕ್ರಮಣದ ಪ್ರಯುಕ್ತ ಸಹ್ಯಾದ್ರಿ ನಿಸರ್ಗ ಬಳಗ, ತಾಲ್ಲೂಕು ಪತ್ರಕರ್ತರ ಸಂಘ. ಡಾ.ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯರ್ ಸೇವಾ ಟ್ರಸ್ಟ್, ಬಿಕ್ಕು ಗುಡಿಗಾರ ಕಲಾ ಕೇಂದ್ರ, ಉಮಾಮಹೇಶ್ವರ ಯುವ ಸೇನಾ, ಹಾಗೂ ಮಾತಾ ಎಲೆಕ್ಟ್ರಿಕಲ್ಸ್ ಸಂಯುಕ್ತವಾಗಿ ಆಯೋಜಿಸಿದ್ದ ‘ಗಾಳಿಪಟ ಉತ್ಸವ’ದಲ್ಲಿ ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅದ್ಯಕ್ಷತೆ ವಹಿಸಿದ್ದ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ‘ಇದು ಮಕ್ಕಳಿಗೆ ಮನರಂಜನೆಯ ಜೊತೆ ಕ್ರಿಯಾಶೀಲತೆ ನೀಡುತ್ತದೆ. ಈ ದೇಸೀಯ ಕ್ರೀಡೆಯಲ್ಲಿ ಇಂದಿನ ಮಕ್ಕಳನ್ನು ತೊಡಗಿಸುವುದು ಕೂಡ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಕ್ರೀಡೆ ನಡೆಯಲಿ. ಮಕ್ಕಳಲ್ಲಿ ಆಸಕ್ತಿ ಮೂಡಿಸಲಿ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಿಕ್ಕು ಗುಡಿಗಾರ ಕಲಾಕೇಂದ್ರದ ಸುಮಿತ್ರಾ ಗುಡಿಗಾರ, ಉದ್ಯಮಿ ಬಾಲು ನಾಯಕ, ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ಸಂತೋಷ ಗುಡಿಗಾರ, ಗಣೇಶ ಭಂಟ್ ಇದ್ದರು. ಸತೀಶ ಯಲ್ಲಾಪುರ, ಮುಕ್ತಾ ಶಂಕರ, ರಮೇಶ ಕಮ್ಮಾರ್, ನಾಗೇಶ ಎಚ್.ಸಿ.ಎನ್ ವಾಹಿನಿ ನಿರ್ಣಾಯಕರಾಗಿ ಬಂದಿದ್ದರು.
ಸಹನಾ ನಾಯ್ಕ ಪ್ರಾರ್ಥನೆ ಹಾಡಿದರು, ಡಾ.ಜಿ.ಪಿ.ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ನಾಗರಾಜ ಮದ್ಗುಣಿ ಸ್ವಾಗತಿಸಿದರು, ಚಂದ್ರಹಾಸ ನಾಯ್ಕ, ಸಂಜೀವಕುಮಾರ ಹೊಸ್ಕೇರಿ, ನಿರೂಪಿಸಿದರು. ಗಣೇಶ ಪಂಡರಾಪುರ ವಂದಿಸಿದರು.