ರಾಯಚೂರು: ನಗರದ ಐತಿಹಾಸಿಕ ಮಾವಿನ ಕೆರೆಯ ನೀರು ಸುತ್ತಮುತ್ತಲಿರುವ ಏಳೆಂಟು ಬಡಾವಣೆಗಳಲ್ಲಿರುವ ಕೊಳವೆ ಬಾವಿಗಳಿಗೆ ಅಂತರ್ಜಲದ ಮೂಲ. ಈಗ ಇಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿಗೆ ಹಾಹಾಕಾರ ಶುರುವಾಗಿದೆ. ಅಲ್ಲದೇ, ಕೊಳಚೆ ನೀರಿನಿಂದ ಕೆರೆ ಕಲುಷಿತಗೊಂಡಿದೆ.
ಕೆರೆಯ ಸುತ್ತಮುತ್ತ ಇರುವ ಐಡಿಎಸ್ಎಂಟಿ ಬಡಾವಣೆ, ಯರಗೇರಾ ಬಡಾವಣೆ, ಸತ್ಯನಾಥ ಕಾಲೊನಿ, ಈರಣ್ಣ ಕಾಲೊನಿ, ಆಜಾದ್ ನಗರ, ಇಂದಿರಾ ನಗರಗಳಲ್ಲಿ ಕೊರೆಸಿರುವ ಕೊಳವೆಬಾವಿಗಳಿಗೆ ಈ ಕೆರೆಯೇ ಆಧಾರ. ಮಾವಿನ ಕೆರೆಯ ಒಡಲಿಲ್ಲ ನೀರು ಇಂಗುತ್ತಿದ್ದಂತೆ ಸುತ್ತಲಿನ ಬಡಾವಣೆಗಳ ಕೊಳವೆಬಾವಿಗಳು ಬರಿದಾಗುತ್ತವೆ. ಸದ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಮೂರ್ನಾಲ್ಕು ದಿನಕ್ಕೊಮ್ಮೆ ನಗರಸಭೆ ನೀರು ಸರಬರಾಜು ಮಾಡುತ್ತಿದೆ.
ನಗರದ 35 ಬಡಾವಣೆಗಳಿಗೆ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್ಬಿಸಿ) ಹಾಗೂ ಕೃಷ್ಣಾ ನದಿಯಿಂದ ನೀರು ಪೂರೈಸಲಾಗುತ್ತದೆ. ಟಿಎಲ್ಬಿಸಿಯಿಂದ ಗಣೇಕಲ್ ಮತ್ತು ರಾಂಪುರ ಜಲಾಶಯಕ್ಕೆ ನೀರು ಹರಿಸಿ, ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಜಲಾಶಯಗಳ ಲ್ಲಿಯೂ ನೀರು ಖಾಲಿಯಾಗಿರುವುದು ಚಿಂತೆಗೆ ಈಡುಮಾಡಿದೆ.
ಸದ್ಯ ಕೃಷ್ಣಾ ನದಿಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆರೆ ಪಕ್ಕದಲ್ಲಿ ನಂದೀಶ್ವರ ದೇವಸ್ಥಾನ, ಸಾಯಿಬಾಬಾ ಹಾಗೂ ಉರಕುಂದಿ ಈರಣ್ಣ ದೇವಸ್ಥಾನ ಇದ್ದು, ಅಲ್ಲಿಗೆ ಬರುವ ಭಕ್ತರು ಕೆಟ್ಟ ವಾಸನೆಯಿಂದ ಬೇಸತ್ತಿದ್ದಾರೆ.