ರಾಮನಗರ: ‘ರಾಮನಗರ ನನ್ನ ಕರ್ಮಭೂಮಿ ಎಂದು ಹೇಳುವ ಎಚ್.ಡಿ.ಕುಮಾರಸ್ವಾಮಿ ಕಳೆದ 8 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಯಮಿತ ಸಂಘದ ನೂತನ ಅಧ್ಯಕ್ಷ ಕೆ.ಶೇಷಾದ್ರಿ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕ್ಷೇತ್ರದ ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಲ್ಲಿ ಮುಖ್ಯಮಂತ್ರಿ ಯವರನ್ನಾಗಲಿ, ಸರ್ಕಾರದ ಯಾವುದೇ ಸಚಿವರನ್ನಾಗಲಿ ಭೇಟಿ ಮಾಡಿ ಒಂದು ಬಿಡಿಗಾಸು ತಂದ ಉದಾಹರಣೆಯಿಲ್ಲ, 2018ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ದಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಲವು ಅಭಿವೃದ್ಧಿ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಕಾರ್ಯಕರ್ತರಿಗೆ ನಿಗಮ ಮಂಡಳಿಗೆ ಅವಕಾಶ ಮಾಡಿಕೊಟ್ಟು ಪಕ್ಷ ಸಂಘಟನೆಗೆ ನೆರವಾಗಲಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಬೇರಿ ದಾಖಲಿಸಲಿದೆ’ ಎಂದು ಭವಿಷ್ಯ ನುಡಿದರು.
ಬೇಡಿಕೆ: ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಲ್ಲಿ ತಯಾರಾಗುವ ವಸ್ತುಗಳಿಗೆ ಭಾರೀ ಬೇಡಿಕೆ ಇದೆ. ಬೆಡಿಕೆಗೆ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ ಈಗಾಗಲೇ ಉತ್ಪಾದನೆಗೊಳ್ಳುತ್ತಿರುವ ಉತ್ಪನಗಳನ್ನು ಬೆಸ್ಕಾಂ, ಕೆಪಿಟಿಸಿಎಲ್ ಗಳಿಗೂ ಪೂರೈಕೆಯಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್, ಹಿರಿಯ ಮುಖಂಡ ಡಿ.ಗಿರಿಗೌಡ, ನಗರಸಭಾ ಅಧ್ಯಕ್ಷ ಪಿ.ರವಿಕುಮಾರ್, ಸದಸ್ಯರಾದ ಎ.ಬಿ. ಚೇತನ್ ಕುಮಾರ್, ಎಚ್.ಎಸ್. ಲೋಹಿತ್್್ ಬಾಬು, ಮಾಜಿ ಉಪಾಧ್ಯಕ್ಷ ಇಕ್ಬಾಲ್ ಷರೀಫ್, ಆರ್. ಮುತ್ತುರಾಜ್, ಮುಖಂಡರಾದ ನಾರಾಯಣಪ್ಪ, ಶಿವಕುಮಾರಸ್ವಾಮಿ, ಬಿ.ಸಿ.ಪಾರ್ವತಮ್ಮ, ವೆಂಕಟಸ್ವಾಮಿ, ದೊಡ್ಡಿ ಸುರೇಶ್, ಪೈರೋಜ್ ಖಾನ್, ಎಂ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.