ರಾಮನಗರ: ‘ರಾಮನಗರ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿಯುವುದು ಖಚಿತ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಎರೇಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಚುನಾವಣಾ ಅಭ್ಯರ್ಥಿ ಪುಟ್ಟರಾಮಯ್ಯ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿದರು. ‘ಈಗಾಗಲೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸ್ಥಾನ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದು ಇದೀಗ ಚುನಾವಣೆ ನಡೆಯುತ್ತಿರುವ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರೆ’ಎಂದು ತಿಳಿಸಿದರು. ಜಿ.ಪಂ. ಸದಸ್ಯ ಎ.ಮಂಜು ಅವರು ಚುನಾವಣೆಯಲ್ಲಿ ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ತಂತ್ರಗಾರಿಕೆ ಮತ್ತು ಚಾಣಾಕ್ಷತನ ಮುಖ್ಯವೇ ಹೊರತು ತಾಕತ್ತು ಮುಖ್ಯವಾಗುವುದಿಲ್ಲ. ಯಾರು ಏನು ಎಂಬುದರ ಬಗ್ಗೆ ಇದೇ 19ರ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
‘ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಮತ್ತು ಕುದೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಭಾವಚಿತ್ರಗಳನ್ನು ಪ್ರದರ್ಶಿಸಿದ ಅವರು, ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಅವರ ಮನೆಯಲ್ಲೇನು ಕೆಲಸ’ ಎಂದು ಪ್ರಶ್ನಿಸಿದರು.
ಚುನಾವಣಾ ಅಭ್ಯರ್ಥಿ ಪುಟ್ಟರಾಮಯ್ಯ ಮತ್ತು ಮುಖಂಡರೊಂದಿಗೆ ಕೂಟಗಲ್ ಹೋಬಳಿಯ ಲಕ್ಷ್ಮಿಪುರ, ಎರೇಹಳ್ಳಿ, ಕೂಟಗಲ್, ಜಾಲಮಂಗಲ ಶ್ಯಾನುಭೋಗನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಶಾಸಕ ಬಾಲಕೃಷ್ಣ ಮತಯಾಚನೆ ಮಾಡಿದರು.
ಮಾಜಿ ಶಾಸಕ ಕೆ.ರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಸದಸ್ಯೆ ಪ್ರಭಾವತಿ, ಮಾಜಿ ಸದಸ್ಯರಾದಎಚ್. ಶಿವಪ್ರಸಾದ್, ಸುಮಿತ್ರರಂಗಸ್ವಾಮಿ, ಮುಖಂಡರಾದ ಕಮಲಮ್ಮ, ಪುಟ್ಟಮಾರೇಗೌಡ, ಮುನಿಯಪ್ಪ, ಪುಟ್ಟಲಿಂಗಣ್ಣ, ಬಿಡದಿ ರಮೇಶ್, ರಾಮಣ್ಣ ಇತರರು ಪಾಲ್ಗೊಂಡಿದ್ದರು.