ಸೊರಬ: ‘ತಾಲ್ಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರತಿ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಜೆಡಿಎಸ್ ಬೆಂಬಲಿಸುತ್ತಿದ್ದಾರೆ’ ಎಂದು ಶಾಸಕ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.
ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಮೂಲಭೂತ ಅವಶ್ಯಕತೆ ಗಳನ್ನೂ ಈಡೇರಿಸಲು ಪ್ರತ್ನಿಸುತ್ತಿದ್ದೇನೆ. ಸರ್ಕಾರ ನೀಡುವ ಅಲ್ಪ ಅನುದಾನದ ನಡುವೆಯೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮೂರೂವರೆ ವರ್ಷದ ಅವಧಿಯಲ್ಲಿ ಜನಪರ ಆಡಳಿತವನ್ನು ಮೆಚ್ಚಿಕೊಂಡು ತಾಲ್ಲೂಕಿನ ಜನರು ಪ್ರತಿ ಚುನಾವಣೆಯಲ್ಲೂ ನಮ್ಮ ಪರವಾಗಿ ಮತ ನೀಡುತ್ತಿದ್ದಾರೆ’ ಎಂದರು.
‘ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಮತ್ತು ಹಾಲಪ್ಪ ಅವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಎಪಿಎಂಸಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸೋಲು ಅನುಭವಿಸಿದ್ದಾರೆ. ಚುನಾವಣೆ ವೇಳೆ ಮಾತ್ರ ತಾಲ್ಲೂಕಿನಲ್ಲಿ ಪ್ರವಾಸ ಮಾಡಿ, ಡೋಂಗಿ ರಾಜಕಾರಣ ಮಾಡುವ ಇವರಿಂದ ಹೊಸದನ್ನು ಕಲಿಯುವ ಅವಶ್ಯಕತೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರ ರಸ್ತೆ ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ತಾಲ್ಲೂಕಿಗೆ ಬಾಕಿ ಉಳಿಸಿಕೊಂಡಿರುವ ₹ 1.86 ಕೋಟಿ ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.
‘ಕೇಂದ್ರ ಹಗೂ ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿವೆ’ ಎಂದು ದೂರಿದ ಅವರು, ‘ರಾಜ್ಯ ಸರ್ಕಾರ ರೈತರಿಗೆ ನೀಡಬೇಕಾದ ತನ್ನ ಪಾಲಿನ ಬೆಳೆ ಪರಿಹಾರವನ್ನು ನೀಡದೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ರೈತರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಕೇಂದ್ರ ರಾಜ್ಯಕ್ಕೆ ನೀಡಬೇಕಾದ ₹ 4,500 ಕೋಟಿ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ, ಎಪಿಎಂಸಿ ಸದಸ್ಯರಾದ ಕೆ.ಅಜ್ಜಪ್ಪ, ಜೈಶೀಲಪ್ಪ, ಶಾಂತಮ್ಮ, ಸರಸ್ವತಿ, ಮುಖಂಡರಾದ ಎಂ.ಡಿ. ಶೇಖರ್, ಶ್ರೀಪಾದ್, ಎಚ್.ಗಣಪತಿ, ರುದ್ರಗೌಡ, ಕೆ.ವಿ.ಗೌಡ, ಯಲಸಿ ಹನುಮಂತಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.