ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಸಮಾಜ: ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹ

ಭೋವಿ ಸಮಾಜದಿಂದ ಸಿದ್ದರಾಮೇಶ್ವರರ ಜನ್ಮ ದಿನಾಚರಣೆ
Last Updated 18 ಜನವರಿ 2017, 6:28 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ತಾಲ್ಲೂಕು ಭೋವಿ ಸಂಘಕ್ಕೆ ಎರಡು ಎಕರೆ ಭೂಮಿ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಜನಾಂಗದ ಮುಖಂಡರೊಡನೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’  ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕು ಭೋವಿ ಜನಾಂಗ ಸಂಘದ ವತಿಯಿಂದ ನಗರದ ಒಕ್ಕಲಿಗರ ಕಲ್ಯಾಣ ಮಂದಿರದಲ್ಲಿ ನಡೆದ ಸಿದ್ದರಾಮೇಶ್ವರರ 845ನೇ ಜನ್ಮ ದಿನಾಚರಣೆ ಮತ್ತು ಭೋವಿ ಜನಾಂಗದ ಸಮಾವೇಶ, ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಭೋವಿ ಜನಾಂಗದ ಯಾವುದೇ ಬಂಡೆ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ಶೇ 80 ರಷ್ಟು ಎಸ್ಸಿ-,ಎಸ್ಟಿ ಕಾಲೊನಿಗಳಿಗೆ ಸಿಮೆಂಟ್ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಸುಸಜ್ಜಿತವಾಗಿ ತಲುಪಿವೆ. ಅಲ್ಲದೆ 16 ಸಾವಿರ ಮನೆಗಳನ್ನು ವಿಶೇಷ ಎಸ್ಸಿ-ಎಸ್ಟಿ ವಿಶೇಷ ವಸತಿ ಯೋಜನೆಯಡಿ ನೀಡಲಾಗಿದೆ. ಹೀಗಾಗಿ ನಿಮ್ಮ ಮನವಿಯಂತೆ ಸಭೆಯ ನಂತರ ಉಳಿದ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. 

ರಾಷ್ಟ್ರೀಯ ಭೋವಿ ವಡ್ಡರ್ ಅಧ್ಯಕ್ಷ ಶಂಕರ್‌ಲಾಲ್ ಮಾತನಾಡಿ, ರಾಷ್ಟ್ರದಲ್ಲಿ  7 ಕೋಟಿ ಭೋವಿ ಜನಸಂಖ್ಯೆ ಇದೆ. ಈ ನಿಟ್ಟಿನಲ್ಲಿ ರಾಷ್ಟ್ರ ರಾಜಕೀಯ ಅಧಿಕಾರದಲ್ಲಿ ಶೇ 30 ಕ್ಕಿಂತ ಹೆಚ್ಚು ಪಾಲು ನಮಗೆ ಸಿಗಬೇಕಿದೆ. ಈ ಹಂತದಲ್ಲಿ ಅಂಬೇಡ್ಕರ್ ಅವರ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಜಾತ್ಯಾತೀತವಾಗಿ ಸಂಘಟಿತರಾಗಿ ಎಂದರು.

ಭೋವಿ ಸಮಾವೇಶ: ರಾಷ್ಟ್ರದಲ್ಲಿ ನಮ್ಮ ಶಕ್ತಿ ಪ್ರತಿಪಾದನೆಗೆ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ 5 ಲಕ್ಷ ಸಮುದಾಯವನ್ನು ಸೇರಿಸಿ ‘ಭೋವಿ ಓಡ್ ಬೃಹತ್ ಸಮಾವೇಶ’ ನಡೆಸಲಿದ್ದು, ಪ್ರಧಾನಿ ಮೋದಿಗೆ ನಮ್ಮ ಶಕ್ತಿ ತೋರಿಸಲಿದ್ದೇವೆ ಎಂದರು.

ತಾಲ್ಲೂಕು ಭೋವಿ ಜನಾಂಗ ಸಂಘದ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಭೋವಿ, ವಡ್ಡ ಮೊದಲಾದ ಹೆಸರಿನ ಎಲ್ಲ ಹೆಸರುಗಳು ಭೋವಿ ಜನಾಂಗಕ್ಕೆ ಸಂಬಂಧಿಸಿದವಾಗಿವೆ. ಒಡ್ಡು ಕಟ್ಟಲು ನಮ್ಮ ಜನಾಂಗ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರಿಂದ ವಡ್ಡರು ಎನ್ನುವ ಹೆಸರು ಬಂದಿದೆ. ವಡ್ಡ ಎನ್ನುವ ಪದ ಅಳಿಸಿ ಭೋವಿ ಎನ್ನುವ ಪದ ಬಳಸಬೇಕಿದೆ ಎಂದರು.

ಜಿ.ಪಂ ಸದಸ್ಯೆ ಅನಂತಕುಮಾರಿ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಎಂ.ವೆಂಕಟಸ್ವಾಮಿ, ನಗರ ಭೋವಿ ಜನಾಂಗದ ಅಧ್ಯಕ್ಷ ಟಿ.ಬಸವರಾಜು, ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ,ಬಿಎಸ್‌ಪಿ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ, ಶ್ರೀನಿವಾಸಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸಾ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್, ಟಿಎಪಿಎಂಸಿ ಅಧ್ಯಕ್ಷ ಗೋವಿಂದರಾಜು, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಹ.ರಾಮಕೃಷ್ಣ, ಭೋವಿ ಜನಾಂಗದ ಮುಖಂಡರಾದ ಓಬದೇನಹಳ್ಳಿ ಮುನಿಯಪ್ಪ, ಅರುಣ್‌ಸಾಗರ್, ಶಿವರುದ್ರ ಸ್ವಾಮಿ, ಸತ್ಯನಾರಾಯಣ್,ಲಾಲ್‌ಚಂದ್ ಇದ್ದರು.

ಸಮಾರಂಭದಲ್ಲಿ ಹಿರಿಯ ನಾಗರಿಕರಿಗೆ ಕಂಬಳಿ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾಜದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿಂದ ವಿವಿಧ ಜಾನಪದ ಕಲಾತಂಡಗಳೊಡನೆ ಸಿದ್ದರಾಮೇಶ್ವರ ಭಾವಚಿತ್ರ ಹಾಗೂ ಸ್ವಾಮೀಜಿ ಅವರ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಾಲನೆ ನೀಡಿದರು.

*

ಭೋವಿ ಜನಾಂಗ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು
-ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ,ಭೋವಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT