ಹುಮನಾಬಾದ್: ಎನ್ಎಸ್ಎಸ್ ರಾಷ್ಟ್ರಸೇವೆಗೆ ಬುನಾದಿ ಎಂದು ಪುರಸಭೆಯ ಉಪಾಧ್ಯಕ್ಷೆ ಪಾರ್ವತಿಬಾಯಿ ಶೇರಿಕಾರ ಹೇಳಿದರು.
ಪಟ್ಟಣದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಜನತಾ ಪ್ರವೀಣ ಶಿಕ್ಷಣ ಸಂಸ್ಥೆಯ ಶಿವಲಿಂಗ ಸ್ವತಂತ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ, ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣ ಪಡೆದು ಪುರುಷರಿಗೆ ಸರಿಸಮನಾದ ಸ್ಪರ್ಧೆಯೊಡ್ಡುವ ಮೂಲಕ ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ಸಾಗಿಸಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಸೇನೆಗೆ ಸೇರಲು ಮುಂದಾಗಬೇಕು. ಅಲ್ಲದೇ ನಾವಿರುವ ಪ್ರದೇಶದಲ್ಲಿ ಸ್ವಚ್ಛತೆ, ಹಕ್ಕು ಹಾಗೂ ಕರ್ತವ್ಯ ಕುರಿತು ಅರಿವು ಮೂಡಿಸುವ ಮೂಲಕ ರಾಷ್ಟ್ರಸೇವೆ ಸಲ್ಲಿಸಬೇಕು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಾಯ್. ಆರ್.ನಂದಿಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಜಾತಿ, ಮತಗಳ ಎಲ್ಲೇ ಮೀರಿ ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವನ್ನು ಯಾವತ್ತೂ ಓದು ಹಾಗೂ ಮೌಲ್ಯಯುತ ಜೀವನಕ್ಕಾಗಿ ಮೀಸಲಾಗಿಸಿಕೊಳ್ಳಬೇಕು. ಸಂಕುಚಿತ ಮನೋಭಾವ ತೊರೆದು ವಿಶಾಲ ಹೃದಯ ಮೈಗೂಡಿಸಿಕೊಳ್ಳಬೇಕು. ರಾಷ್ಟ್ರ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನ ಯುವಕರಿಂದ ಆಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಲಿಂಗ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಬಿ.ಹಾಲ್ಗೊರ್ಟಾ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಅನುಭವಿಸುವ ಸಂಕಷ್ಟ ಅರ್ಥೈಸಿಕೊಂಡು, ಉತ್ತಮ ಫಲಿತಾಂಶ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪುರಸಭೆ ಸದಸ್ಯ ನೂರ್ ಕಲೀಂಸಾಬ್, ಶಾಂತಿನಿಕೇತನ ಶಾಲೆ ಮುಖ್ಯಶಿಕ್ಷಕ ಜಗನ್ನಾಥ ಕಾಂಬ್ಳೆ, ಚಂದ್ರಕಾಂತ ಬಾಲಕುಂದೆ ಇದ್ದರು. ಝೆಡ್ ಬಸವರಾಜ ಸ್ವಾಗತಿಸಿದರು. ಶಿಬಿರಾಧಿಕಾರಿ ಮದನ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಬಿ.ಎನ್.ಪಾಟೀಲ ನಿರೂಪಿಸಿದರು. ಜೈಭೀಮ ದೊಡ್ಮನಿ ವಂದಿಸಿದರು.