ಮಾಗಡಿ: ಕನ್ನಡ ಭಾಷೆಯ ಹಿರಿಮೆ ಗರಿಮೆ, ಸುಂದರ ಬರಹದ ಸೌಂದರ್ಯ ಲಾಲಿತ್ಯಗಳ ಜೊತೆಗೆ ಕನ್ನಡಿಗರ ನಿಜ ಜನಪದ ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಪಿ.ನಂಜುಂಡ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಗೇಪಲ್ಲಿ ಕನ್ನಡ ಮತ್ತು ಸಂಸ್ಕೃತಿ ಸೇವಾ ಭಾರತಿ ಸಂಸ್ಥೆ ವತಿಯಿಂದ ಈಚೆಗೆ ನಡೆದ ಕನ್ನಡ ಪದ ಸಂಪತ್ತು 1251 ನೇ ಉಪನ್ಯಾಸದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದು ಚಾಲನೆ ನೀಡಿ ಅವರು ಮಾತನಾಡಿದರು.
ತಿರುಳ್ಗನ್ನಡದ ವ್ಯಾಕರಣ, ಛಂದಸ್ಸು, ಅಲಂಕಾರಗಳನ್ನು ಮರೆಯದೆ ಕಲಿಸಬೇಕಿದೆ. ಅಂಗನವಾಡಿ ಕೇಂದ್ರಗಳಿಂದಲೇ ಮಕ್ಕಳಿಗೆ ಕನ್ನಡ ಭಾಷೆಯ ಕುರಿತು ಕಲಿಸಬೇಕು ಎಂದು ಇತಿಹಾಸ ಸಂಶೋಧಕ ಪ್ರೊ. ತಿಮ್ಮಹನುಮಯ್ಯ ತಿಳಿಸಿದರು.
ಬಾಗೇಪಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥಾಪಕ ಹಾಗೂ ಹಿರಿಯ ಸಾಹಿತಿ ಓಂಕಾರಪ್ರಿಯ ಮಾತನಾಡಿ, ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಭಾಷೆಯ ವ್ಯಾಮೋಹ ಸೀಮಿತವಾಗಬಾರದು. ಕನ್ನಡದ ಕಂದಮ್ಮಗಳಿಂದ ಹಿರಿಯ ಸಾಹಿತಿಗಳು ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದರು. ಇಂಗ್ಲಿಷ್ ವಿಭಾಗದ ಪ್ರೊ.ಮಂಜುನಾಥ್, ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಅನಿಲ್ ಇದ್ದರು.