ಭಟ್ಕಳ: ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಿಗೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಭೇಟಿ ನೀಡಿದ ಶಾಸಕ ಮಂಕಾಳ ವೈದ್ಯ ಪರಿಶೀಲನೆ ನಡೆಸಿದರು.
ಮೂಲಸೌಕರ್ಯಗಳಿಂದ ವಂಚಿತವಾಗಿದ್ದ ಹಲವು ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪದ ದುರಸ್ತಿಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು ಪರಿಹರಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಪುರಸಭೆ ವ್ಯಾಪ್ತಿಯ ವಾರ್ಡ್ಗಳ ಅಭಿವೃದ್ಧಿಗಾಗಿ ಶಾಸಕರು ಸರ್ಕಾರದಿಂದ ವಿಶೇಷವಾಗಿ ₹7.5ಕೋಟಿ ಅನುದಾನ ಮಂಜೂರಾಗಿದ್ದು, ಅಭಿವೃದ್ಧಿ ಕಾಣದ, ಮೂಲಸೌಕರ್ಯದಿಂದ ವಂಚಿತವಾಗಿದ್ದ ವಾರ್ಡ್ಗಳಿಗೆ ಅನುದಾನವನ್ನು ಹಂಚುವುದಾಗಿ ಶಾಸಕರು ಹೇಳಿದರು.
ವಾರ್ಡ್ ಇರುವುದೇ ಗೊತ್ತಿಲ್ಲ !
ಇಲ್ಲಿನ ಮಣ್ಕುಳಿಯ ತಲಾಂದನ ಪ್ರದೇಶ ಪುರಸಭೆ ವ್ಯಾಪ್ತಿಗೆ ಬರುತ್ತದೆ ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಸಕರಿಗೆ ಹೇಳಿದ್ದು ಒಮ್ಮೆ ಸ್ಥಳದಲ್ಲಿನ ಸಾರ್ವಜನಿಕರು ಆಶ್ಚರ್ಯ ಪಡುವಂತಾಯಿತು. ಮುಂದಿನ ದಿನಗಳಲ್ಲಿ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಖುದ್ದಾಗಿ ಮುತುವರ್ಜಿ ವಹಿಸುವುದಾಗಿ ಅಧ್ಯಕ್ಷ ಸಾಧಿಕ್ ಮಟ್ಟಾ ಹೇಳಿದರು.
ಬೆಳಿಗ್ಗೆ 10 ಗಂಟೆಗೆ ಆರಂಭಿಸಿದ ವಾರ್ಡ್ಗಳ ಪರಿಶೀಲನೆ ಸಂಜೆಯವರೆಗೂ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ನಾಯ್ಕ, ಜಾಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ರಹೀಮ್, ತಹಶೀಲ್ದಾರ್ ವಿ. ಎನ್. ಬಾಡ್ಕರ, ಹೆಸ್ಕಾಂ ಎಂಜಿನಿಯರ್ ಮಂಜುನಾಥ, ಮುಖ್ಯಾಧಿಕಾರಿ ವೆಂಕಟೇಶ ನಾವುಡ ಇತರ ಹಿರಿಯ ಅಧಿಕಾರಿಗಳು ಇದ್ದರು.