ಬೆಂಗಳೂರು: ವಿಧಾನಸೌಧ ಇಂದು ನ್ಯಾಯದ ಗುಡಿಯಾಗಿ ಉಳಿಯದೆ ಮಾಲ್ ಆಗಿ ಪರಿವರ್ತನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಕನ್ನಡ ಕ್ರಿಯಾ ಸಮಿತಿ ಏರ್ಪಡಿಸಿದ್ದ ‘ವಿಧಾನ ಸೌಧ–60 ಒಂದು ಹಿನ್ನೋಟ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದಾ ಸುಂದರಿಯಾದ ವಿಧಾನಸೌಧ ಜನತಾ ನ್ಯಾಯಾಲಯ ಇದ್ದಂತೆ. ಇಲ್ಲಿ ನಾಡಿನ ಸಮಸ್ತ ಜನರ ಕಷ್ಟ–ಸುಖಗಳಿಗೆ ಪರಿಹಾರ ಸಿಗಬೇಕು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಆಡಳಿತ ನಡೆಸಿದ ವಿಧಾನಸೌಧ ಈಗ ಕುತಂತ್ರಿಗಳ ತಾಣವಾಗಿದೆ ಎಂದರು.
ತಲೆ ಹಿಡುಕರು, ಜೂಜುಕೋರರು, ಭ್ರಷ್ಟಾಚಾರಿಗಳು ತುಂಬಿ ಹೋಗಿದ್ದಾರೆ. ಶಾಸಕ ಸ್ಥಾನ ಗಿಟ್ಟಿಸಿಕೊಳ್ಳಲು ಬಯಸುವ ಜನ ನಿತ್ಯ ಅದರ ಸುತ್ತ ಗಿರಕಿ ಹೊಡೆಯುತ್ತಿರುತ್ತಾರೆ. ಆಸೆ ಈಡೇರದೆ ಸತ್ತವರ ಆತ್ಮಗಳು ವಿಧಾನಸೌಧದ ಸುತ್ತ ಸುಳಿದಾಡುತ್ತಿವೆ ಎಂದು ಹೇಳಿದರು.
ಜನಸಾಮಾನ್ಯರಿಗೆ ಆಡಳಿತದ ಕೇಂದ್ರ ಬಿಂದುವಾದ ವಿಧಾನಸೌಧದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಆಗಬೇಕಿದೆ. ಮಾಧ್ಯಮ ಮತ್ತು ಚಳವಳಿಗಳು ಹೊಸ ರೂಪದಲ್ಲಿ ಸಾಗಬೇಕಿದೆ ಎಂದು ಅವರು ತಿಳಿಸಿದರು.