ಬೆಂಗಳೂರು: ನಗರದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ (ಐಸೆಕ್) ಶುಕ್ರವಾರ ನಡೆದ ಸಂಸ್ಥಾಪಕರ ದಿನಾಚರಣೆಯನ್ನು ಸಂಶೋಧನಾ ವಿದ್ಯಾರ್ಥಿಗಳು ಬಹಿಷ್ಕರಿಸಿದರು.
ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಜಿ. ಚಂದ್ರಕಾಂತ್ ಅವರು ವಿದ್ಯಾರ್ಥಿ ವಿರೋಧಿ ನೀತಿ ತಳೆದಿದ್ದಾರೆ ಎಂದು ಆರೋಪಿಸಿ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಪ್ರತಿಭಟನೆ ನಡೆಸಿದರು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆಯಲ್ಲೂ ಅವರು ಪಾಲ್ಗೊಳ್ಳಲಿಲ್ಲ.
‘ಸಂಶೋಧನಾ ವಿದ್ಯಾರ್ಥಿಗಳಿಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ನಿರ್ದೇಶಕರು ಮುಂದಾಗಿದ್ದಾರೆ. ಇದು ಪ್ರಾಯೋಗಿಕ ಅಲ್ಲ. ದೇಶದ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿಲ್ಲ. ವಿದ್ಯಾರ್ಥಿಗಳ ತಿಂಗಳ ಪ್ರಗತಿ ವರದಿಯನ್ನು ನೀಡಲು ಸಿದ್ಧರಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಪಿಎಚ್.ಡಿ ಮಾರ್ಗದರ್ಶಕರ ಆಯ್ಕೆ ನಿಯಮವನ್ನೂ ಬದಲಿಸಲಾಗಿದೆ. ಇದು ಸರಿಯಲ್ಲ. ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನದ ಕಡಿತ ಮಾಡಲಾಗಿದೆ’ ಎಂದು ಅವರು ದೂರಿದರು.