ಚಿಕ್ಕಮಗಳೂರು: ಶೃಂಗೇರಿ ಜೆಸಿಬಿಎಂ ಕಾಲೇಜು ವಿದ್ಯಾರ್ಥಿ ಹಾಗೂ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು 48ಗಂಟೆ ಯೊಳಗೆ ಬಂಧಿಸದಿದ್ದಲ್ಲಿ ಸಂಘಟನೆ ಯಿಂದ ರಾಜ್ಯದಾದ್ಯಂತ ‘ಚಿಕ್ಕಮಗ ಳೂರು ಚಲೋ’ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜೇಶ್ ಗುರಾಣಿ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಷೇಕ್ ಆತ್ಮಹತ್ಯೆ ಮಾಡಿ ಕೊಂಡು ಹೀಗಾಗಲೇ 14 ದಿನಗಳು ಕಳೆದಿವೆ. ಆತನ ಸಾವಿಗೆ ಕಾರಣರಾದ ಆರೋಪಿ ಗಳ ವಿರುದ್ಧ ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೂ, ಪೊಲೀಸ್ ಅಧಿಕಾರಿಗಳು ಆರೋಪಿ ಗಳನ್ನು ಬಂಧಿಸಲು ಮುಂದಾಗದೆ, ಪ್ರಕ ರಣದ ಬಗ್ಗೆ ವಿಳಂಬ ನೀತಿ ಅನುಸ ರಿಸುತ್ತಿರುವುದು ಖಂಡಿನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿಷೇಕ್ ದೇಶಭಕ್ತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕಾಲೇಜಿನ ವಾಣಿಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ. ಕಾಲೇಜಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ವಿದ್ಯಾರ್ಥಿಗಳ ಕುಂದುಕೊರತೆ ಆಲಿಸುವ ವಿದ್ಯಾರ್ಥಿ ನಾಯಕನಾಗಿ ಬೆಳೆಯುತ್ತಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರ ವಿಷಯ ಎಂದರು.
ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಎಬಿವಿಪಿ ಜಿಲ್ಲಾದ್ಯಂತ ಶಾಂತಿಯುತ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಸರ್ಕಾರದ ಒತ್ತಡಕ್ಕೆ ಮಣಿದ ಪೊಲೀಸ್ ಇಲಾಖೆ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ವಿದ್ಯಾರ್ಥಿಗಳ ಹೋರಾ ಟದ ಹಕ್ಕನ್ನು ಕಿತ್ತುಕೊಳ್ಳುತ್ತಿ ದ್ದಾರೆ. ದೇಶದ ಸಂವಿಧಾನ ಪ್ರತಿ ಪ್ರಜೆಗೂ ವಾಕ್ ಸ್ವಾತಂತ್ರ್ಯದ ಹಕ್ಕು ನೀಡಿದೆ.
ಅವುಗಳಿಗೆ ಧಕ್ಕೆಯಾದಾಗ ಅದನ್ನು ಪ್ರಶ್ನಿಸುವ ಹಕ್ಕನ್ನು ಸಮಾನವಾಗಿ ನೀಡಿದೆ. ತಪ್ಪು ಎಸಗಿರುವ ಆರೋಪಿಗಳನ್ನ ಬಂಧಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗುತ್ತಿದೆ.
ನಮ್ಮ ಹೋರಾಟ ಪೊಲೀಸ್ ಇಲಾಖೆ ಅಥವಾ ಅಧಿಕಾರಿಗಳ ವಿರುದ್ಧವಲ್ಲ. ಅಭಿಷೇಕನ ಸಾವಿಗೆ ನ್ಯಾಯ ಸಿಗಬೇಕೆಂಬುದು ಸಂಘಟನೆಯ ಮುಖ್ಯ ಉದ್ದೇಶ. ಆದರೆ, ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಅಭಿಷೇಕ್ ಸಾವಿನ ಪ್ರಕರಣದಲ್ಲಿ ಕೇವಲ ಒಬ್ಬಿಬ್ಬರ ಮೇಲೆ ಪ್ರಕರಣ ದಾಖಲಿಸಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನಕ್ಕೆ ನಾವು ಅವಕಾಶ ನೀಡುವು ದಿಲ್ಲ. ಅಭಿಷೇಕ್ ಸಾವಿನ ತನಿಖೆಗೆ ರಾಜಕೀಯ ಬಣ್ಣ ಬಳಿಯಬಾ ರದು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಪಕ್ಷಾತೀತವಾಗಿ ಶಿಕ್ಷೆಯಾಗ ಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ರಾಜ್ಯದ ಗೃಹ ಸಚಿವರು ದ್ವಂದ್ವ ನಿಲುಗಳನ್ನು ತೆಗೆದುಕೊಳ್ಳುತ್ತಿದೆ. ಆಮ್ನೆಸ್ಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು 4ದಿನಗಳನ್ನು ತೆಗೆದುಕೊಳ್ಳುತ್ತಾರೆ. ಜೆಸಿಬಿಎಂ ಕಾಲೇಜಿನಲ್ಲಿ ಪ್ರಕರಣ ನಡೆದ ಕೂಡಲೇ ಪ್ರಕರಣ ದಾಖಲಾಗಿ ಬಿಡುತ್ತದೆ ಎಂದರು.
ಅಭಿಷೇಕ್ ಸಾವಿಗೆ ನ್ಯಾಯ ದೊರಕಿ ಸಲು ಎಬಿವಿಪಿಯಿಂದ ಹೋರಾಟ ಹಮ್ಮಿ ಕೊಂಡರೆ ಪೊಲೀಸ್ ಸಿಬ್ಬಂದಿ ಕಾರ್ಯ ಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ವಿದ್ಯಾಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡ ಲಾಗುವುದು. ಅಭಿಷೇಕ್ ಆತ್ಮಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯದ ವರೆಗೆ ಕೊಂಡೊಯ್ಯುವುದಾಗಿ ಅವರು ತಿಳಿಸಿದರು.
ಬೆಂಗಳೂರು ವಿವಿ ಸಂಶೋಧನಾ ಮತ್ತು ಸ್ನಾತಕ್ಕೋತ್ತರ ವಿದ್ಯಾರ್ಥಿ ಒಕ್ಕೂಟ ಸಹ ಅಭಿಷೇಕ್ ಸಾವಿಗೆ ನ್ಯಾಯ ಕೋರಿ ಎಬಿವಿಪಿ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಆರೋಪಿಗಳ ಶೀಘ್ರವೇ ಬಂಧನ ಆಗಬೇಕು ಎಂದು ಅವರು ತಿಳಿಸಿದರು.
ಸಂಘಟನೆ ಅಧ್ಯಕ್ಷ ಜಗದೀಶ್ ಮಾನೆ, ರಾಜ್ಯ ವಿದ್ಯಾರ್ಥಿನಿ ಪ್ರಮುಖ್ ವೀಣಾ, ಬೆಂಗಳೂರು ವಿಶ್ವ ವಿದ್ಯಾನಿ ಲಯದ ಸ್ನಾತಕ್ಕೋತ್ತರ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಸುನೀಲ್, ರಾಜ್ಯ ಕಾನೂನು ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆಯ ಶೋಭಾ,ಜಿಲ್ಲಾ ಪ್ರಮುಖ್ ಗಗನ್ ಕಡೂರ್ ಇತರರು ಇದ್ದರು.
*
ಅಭಿಷೇಕ್ ಡೆತ್ನೋಟ್ನಲ್ಲಿ ತನ್ನ ಮೇಲೆ ಸುಳ್ಳುದೂರು ದಾಖಲಾಗಿದೆ ಎಂದು ಸ್ಪಷ್ಟವಾಗಿ ಬರೆದಿದ್ದಾನೆ. ಎನ್ಎಸ್ಯುಐ ಕಾರ್ಯಕರ್ತರ ವಿರುದ್ಧ ಆರೋಪ ಮಾಡಿದ್ದಾನೆ.
–ಹರ್ಷ,
ಎಬಿವಿಪಿ ರಾಜ್ಯ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.