ಲಿಂಗಸುಗೂರು: ತಾಲ್ಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ಅತಿಕ್ರಮಣ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಗುಡಿಹಾಳ ಶಾಲಾ ಸುಧಾರಣ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಶುಕ್ರವಾರ ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು.
ಶಾಲಾ ಕಟ್ಟಡ ಹಾಗೂ ಮೈದಾನದ ಅವಶ್ಯಕತೆ ಆಧರಿಸಿ ಅತಿಕ್ರಮಣಕಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗಿದೆ. ಕೆಲವರ ದುರುದ್ದೇಶದಿಂದ ಶಾಲಾ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತಿದ್ದು ತಾಲ್ಲೂಕು ಆಡಳಿತ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿದರು.
ಶಾಲಾ ಆವರಣದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಿದೆ. ಅತಿಕ್ರಮಣಕಾರರ ಕಟ್ಟಡ ಮತ್ತು ತಾತ್ಕಾಲಿಕ ಶೆಡ್ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಬಸಪ್ಪ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ, ಬಸವರಾಜ, ಮುಖಂಡರಾದ ನಾಗರಾಜ, ತಿಪ್ಪಣ್ಣ, ಅಮೀನಸಾಬ, ರಾಜಾಸಾಬ, ಶರಣಪ್ಪ, ನಾಗಪ್ಪ, ದ್ಯಾಮಣ್ಣ, ಶಂಕರಪ್ಪ, ಮಾನಪ್ಪ, ದೊಡ್ಡಬಸವ, ಯಮನೂರ, ಶಿವರಾಜ, ಯಮನಪ್ಪ, ಮರಿಯಪ್ಪ, ಅಂಬಣ್ಣ, ಮುಸ್ತಫಾ ಭಾಗವಹಿಸಿದ್ದರು.