ಅಂಕೋಲಾ: ‘ಸುಪ್ರೀಂ ಕೋರ್ಟ್ ₹ 18 ಸಾವಿರ ಕನಿಷ್ಠ ಕೂಲಿ ನೀಡಬೇಕೆಂದು ಆದೇಶಿಸಿದ್ದರೂ ಇನ್ನುವರೆಗೂ ಸರ್ಕಾರ ಜಾರಿಗೊಳಿಸದೆ ಜಾಣ ಮೌನ ವಹಿಸಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಶಾಂತಾರಾಮ ನಾಯಕ ಹೇಳಿದರು.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿ.ಐ.ಟಿ.ಯು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರು ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಸತ್ಯಾಗ್ರಹ ಸ್ಮಾರಕ ಮೈದಾನದಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು. ತಹಶೀಲ್ದಾರ್ ಬಿ. ಫೌಜಿಯಾ ತೆರನುಮ್ ಅವರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು. ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ. ನಾಯಕ, ವಿವಿಧ ಸಂಘಟನೆಯ ಮುಖಂಡರಾದ ಮೀನಾಕ್ಷಿ ನಾಯಕ, ಲೀಲಾ ನಾಯ್ಕ, ಶ್ಯಾಮಲಾ ನಾಯ್ಕ, ವಿನಯ ಗೌಡ, ರಾಜು ಗೌಡ, ಸಂತೋಷ ನಾಯ್ಕ, ಗೌರೀಶ ನಾಯಕ, ಮಂಕಾಳಿ ಗೌಡ, ವೀಣಾ ನಾಯ್ಕ, ಜಯಾ ನಾಯ್ಕ ಸೇರಿದಂತೆ 500ಕ್ಕೂ ಅಧಿಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಮನವಿ ಸಲ್ಲಿಕೆ
ಸಿದ್ದಾಪುರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಕಡಿತ ಮಾಡಿರುವುದನ್ನು ವಾಪಸ್ಸು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಸಂಘ (ಸಿಐಟಿಯು ಸಂಯೋಜಿತ)ದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಸ್ಥಳೀಯ ತಹಶೀಲ್ದಾರ್ ವಿ.ಜಿ.ಲಾಂಜೇಕರ ಅವರ ಮೂಲಕ ಪ್ರಧಾನಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಮಾಡಬೇಕು. ಕಾರ್ಯಕರ್ತರಿಗೆ ಪೂರ್ಣ ತರಬೇತಿ ನೀಡಿ, ಎಲ್ಕೆಜಿ, ಯುಕೆಜಿ ತರಹದ ಪಠ್ಯಕ್ರಮ ಆರಂಭಿಸಬೇಕು ಮತ್ತಿತರ ಬೇಡಿಕೆಗಳಿಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷೆ ಸುಧಾ ಕೊಂಡ್ಲಿ, ಕಾರ್ಯದರ್ಶಿ ಶ್ರೀಮತಿ ನಾಯ್ಕ, ಖಜಾಂಜಿ ಯಮುನಾ ನಾಯ್ಕ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.