ಕಲಬುರ್ಗಿ: ಬೆಂಗಳೂರಿನಲ್ಲಿ 2011ರಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಸದಸ್ಯ, ಕೋಲಾರದ ವೆಂಕಟೇಶ ಮೌರ್ಯಯನ್ನು ಉಪ್ಪಾರಪೇಟೆ ಪೊಲೀಸರು ಶನಿವಾರ ಇಲ್ಲಿ ವಶಕ್ಕೆ ಪಡೆದರು.
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಕಾರಿಣಿ ನಡೆದ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಜಿಲ್ಲಾ ಪೊಲೀಸ್ ಭವನಕ್ಕೆ ಕರೆದೊಯ್ದರು. ವಿಚಾರಣೆ ನಡೆಸಿದ ಬಳಿಕ ಜ.23ರಂದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ, ಕಳುಹಿಸಿದರು.
ಮಣ್ಣು ಕುಸಿದು ಇಬ್ಬರು ಸಾವು
ಕುದೂರು (ಮಾಗಡಿ): ತಮ್ಮೇನಹಳ್ಳಿ ಕೆರೆಯಲ್ಲಿ ಮರಳು ಸಂಗ್ರಹ ಮಾಡಿ ತಂದು ಗುಡ್ಡೆ ಹಾಕುವಾಗ ಮೇಲ್ಪದರದ ಮಣ್ಣು ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಹಂಚಿ ಬಸವನಪಾಳ್ಯದ ನಿವಾಸಿಗಳಾದ ಆಫೀಜ್ಖಾನ್(55), ಅಜೀಜ್ ಖಾನ್(24) ಮೃತಪಟ್ಟವರು.
‘ಕಾನೂನು ತೊಡಕು ನಿವಾರಿಸಲಿ’
ಸೋಮವಾರಪೇಟೆ: ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯಂತೆ, ರಾಜ್ಯ ಕರಾವಳಿಯ ಕಂಬಳ ಕ್ರೀಡೆಗೆ ಇರುವ ಕಾನೂನು ತೊಡಕು ನಿವಾರಣೆಗೆ ಕೇಂದ್ರ ಮುಂದಾಗಬೇಕು ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದರು.
ಪ್ರಧಾನಿ ಮೋದಿ ಅವರು ರಾಜ್ಯಗಳ ನಡುವೆ ತಾರತಮ್ಯ ತೋರುತ್ತಿದ್ದಾರೆ. ಜಲ್ಲಿಕಟ್ಟು ಕ್ರೀಡೆಗೆ ನೆರವಾಗಲು ಸುಗ್ರಿವಾಜ್ಞೆ ತರಲು ತೋರಿದ ಆಸಕ್ತಿಯನ್ನು ಕಂಬಳ ಕುರಿತು ನೀಡುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಲ್ಲಿಕಟ್ಟುವಿನಲ್ಲಿ ಪ್ರಾಣಹಾನಿಗೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಆದರೆ, ಕಂಬಳ ರೈತರ ಸಾಂಪ್ರದಾಯಿಕ ಕ್ರೀಡೆ. ಇಲ್ಲಿ ಪ್ರಾಣಿ ಹಿಂಸೆಗೆ ಆಸ್ಪದವಿಲ್ಲ ಎಂದರು.
ನಗ್ನಚಿತ್ರದ ಗಾಳಿಪಟ !
ಬೆಳಗಾವಿ: ಇಲ್ಲಿ ಶನಿವಾರ ನಡೆದ 7ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಜರ್ಮನಿಯ ಪ್ರಜೆಯೊಬ್ಬರು ನಟಿಯ ನಗ್ನ ಚಿತ್ರವಿರುವ ಗಾಳಿಪಟ ಹಾರಿಸಿದರು.
ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದ ಪರಿವರ್ತನ ಪರಿವಾರ ಸಂಘಟನೆ ಗಾಳಿಪಟ ಉತ್ಸವ ಆಯೋಜಿಸಿತ್ತು. ಜರ್ಮನಿಯ ಆ್ಯಕ್ಸೆಲ್ ಕಾಸ್ಟ್ರೋಸ್ ಅವರು ಚಿತ್ರನಟಿ ಹಾಗೂ ಸಂಗೀತ ಕಲಾವಿದೆ ಮೈಲಿನ್ ಫರ್ಹರ್ ಅವರ ನಗ್ನ ಚಿತ್ರದ ಗಾಳಿಪಟ ಹಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.