ಕೊಣನೂರು (ಹಾಸನ ಜಿಲ್ಲೆ): ದಲಿತ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಮೀಪದ ಹಾನಗಲ್ ಕರ್ಕಿಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾನಗಲ್ ಗ್ರಾಮದ ದಲಿತ ಕಾಲೊನಿಯ ಹರೀಶ್ (33) ಹತ್ಯೆಗೀಡಾದ ವ್ಯಕ್ತಿ.
ಹರೀಶ್, ಪತ್ನಿಯೊಂದಿಗೆ ಐದಾರು ವರ್ಷಗಳಿಂದ ಕರ್ಕಿಕೊಪ್ಪಲು ಗ್ರಾಮದ ಜಮೃದ್ ಸಾಬ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲ ದಿನಗಳಿಂದ ಕೆಲಸಕ್ಕೆ ಹೋಗಿರದ ಕಾರಣ ಸಿಟ್ಟಿಗೆದ್ದ ಜಮೃದ್ ಸಾಬ್, ಮಕ್ಕಳಾದ ಸದ್ದಾಂ ಮತ್ತು ಇಫ್ರಾನ್ ಗುರುವಾರ ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹತ್ಯೆಯನ್ನು ಮುಚ್ಚಿ ಹಾಕಲು ಸಂಚು ರೂಪಿಸಿದ ಸದ್ದಾಂ ಮತ್ತು ಇಫ್ರಾನ್ ಹರೀಶ್ ಶವವನ್ನು ಕೊಣನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಸಹೋದರ ದೇವರಾಜು ಅವರಿಗೆ ಮೊಬೈಲ್ ಕರೆ ಮಾಡಿ, ‘ನಿನ್ನ ತಮ್ಮ ವಿಷ ಸೇವಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಿದ್ದೇವೆ’ ಎಂದು ತಿಳಿಸಿದ್ದಾರೆ.
ಕೊಣನೂರು ಆಸ್ಪತ್ರೆಗೆ ಬಂದ ದೇವರಾಜು ಹಾಗೂ ಸಂಬಂಧಿಕರು ಶವವನ್ನು ಖಾಸಗಿ ವಾಹನದಲ್ಲಿ ಸ್ವಗ್ರಾಮ ಹಾನಗಲ್ಗೆ ತೆಗೆದುಕೊಂಡು ಬಂದಿದ್ದಾರೆ. ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆಗಾಗಿ ಮೃತದೇಹವನ್ನು ತೊಳೆಯಲು ಬಟ್ಟೆ ಬಿಚ್ಚಿದಾಗ, ಎದೆಯ ಭಾಗಕ್ಕೆ ಕಲ್ಲಿನಿಂದ ಜಜ್ಜಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು, ಕಾಲುಗಳನ್ನು ಕೊಚ್ಚಿ ಗಾಯಗೊಳಿಸಿರುವ ಗುರುತು ಕಂಡು ಬಂದಿದೆ. ಶವವನ್ನು ಮತ್ತೆ ಕೊಣನೂರು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
‘ಮನೆ ಕೆಲಸಕ್ಕೆ ಹೋಗದ ಕಾರಣ ಕೊಲೆ ನಡೆದಿದೆ’ ಎಂದು ಹರೀಶ್ ಕುಟುಂಬದವರು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.