ಉಡುಪಿ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ನಿರ್ದಿಷ್ಟವಾದ ಕಾರ್ಯಸೂಚಿ ಹಾಗೂ ಇತರ ಅಂಗಗಳ ನಿಯಂತ್ರಣ ಇಲ್ಲದಿದ್ದರೂ, ನೀತಿ ಸಂಹಿತೆಯನ್ನೂ ಸ್ವಯಂ ರೂಪಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಪತ್ರಕರ್ತರಿಗೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ರಂಗವನ್ನು ಕಾರ್ಯಾಂಗ, ನ್ಯಾಯಾಂಗ ನಿಯಂತ್ರಣ ಮಾಡುವ ಬದಲು ತನ್ನಷ್ಟಕ್ಕೇ ತಾನೇ ಸುಧಾರಿಸಿಕೊಂಡು ಹೋಗಬೇಕು. ಪತ್ರಕರ್ತರು ಸಹ ಆಯಾ ಕಾಲ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಸಾಗಬೇಕು. ಪತ್ರಕರ್ತ ರಾದವರಿಗೆ ಭಾಷೆಯ ಮೇಲೆ ಪ್ರಬುದ್ಧತೆ ಇರಬೇಕು. ಬರೆಯುವ ಸುದ್ದಿಗಳಲ್ಲಿ ನಿಖರತೆ ಮತ್ತು ಸ್ಪಷ್ಟತೆ ಇರಬೇಕು ಎಂದು ಹೇಳಿದರು.
ಪತ್ರಕರ್ತರಾದ ದೇವು ಪತ್ತಾರ್ ಮತ್ತು ವಿನೋದ್ ಕುಮಾರ್ ಬಿ ನಾಯಕ್ ಅವರು ಕ್ರಮವಾಗಿ ‘ಸಮ ಕಾಲೀನ ತಲ್ಲಣಗಳು ಮತ್ತು ಪತ್ರಿಕೋ ದ್ಯಮ’ ಹಾಗೂ ‘ಪತ್ರಿಕಾ ಕಾನೂನು ಮತ್ತು ನೀತಿ ಸಂಹಿತೆ’ ವಿಷಯ ಕುರಿತು ಮಾತನಾಡಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಮುತ್ತು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಕಾರ್ಯದರ್ಶಿ ಎಸ್. ಶಂಕರಪ್ಪ, ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ, ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ, ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷದ ಆಸ್ಟ್ರೋಮೋಹನ್, ಪತ್ರಕರ್ತರಾದ ಜಯಕರ ಸುವರ್ಣ, ಹರೀಶ್ ಹೆಜಮಾಡಿ ಉಪಸ್ಥಿತರಿದ್ದರು.