ಕಲಬುರ್ಗಿ: ಕೊಳಚೆ ನಿರ್ಮೂಲನ ಕಾಯಿದೆ ಅಂಶಗಳನ್ನು ಸಮರ್ಪಕ ಜಾರಿಗೆ ತಂದು ಕೊಳೆಗೇರಿ ಅಭಿವೃದ್ಧಿ ಕಾಯಿದೆ ತಿದ್ದುಪಡಿಮಾಡಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಸ್ಲಂ ಜನಾಂದೋಲನ ಜಿಲ್ಲಾ ಘಟಕ ಭಾನುವಾರ ಕನ್ನಡ ಭವನದಲ್ಲಿ ಹಮ್ಮಿಕೊಂಡ ಸ್ಲಂ ಜನರ ಮೇಲಿನ ತಾರತಮ್ಯ ನೀತಿ ಕುರಿತ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹುಡ್ಕೊ ವಾಲ್ಮೀಕಿ, ಅಂಬೇಡ್ಕರ್ ಆವಾಸ್ ಯೋಜನೆಯ 58 ಸಾವಿರ ಕುಟುಂಬಗಳ ₹276.34 ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ಸ್ಥಳೀಯ ಸಂಸ್ಥೆ ಮಾಲೀಕತ್ವದಲ್ಲಿರುವ 1184 ಸ್ಲಂಗಳ ಜನರಿಗೆ ಒಡೆತನ ಹಾಗೂ ಸರ್ಕಾರ ಘೋಷಿಸಿರುವ 2788 ಕೊಳಚೆ ಪ್ರದೇಶಗಳಿಗೆ ಸ್ಲಂ ಕಾಯಿದೆ ಪ್ರಕಾರ ನೋಂದಣಿ ಪತ್ರ ನೀಡಲು ಸಂಪುಟದಲ್ಲಿ ಚರ್ಚಿಸಿ ನಿರ್ಣಯಿಸುವುದಾಗಿ ಭರವಸೆ ನೀಡಿದರು.
ನಗರೀಕರಣ ಮತ್ತು ಸಾಮಾಜಿಕ ಅಸಮಾನತೆಯ ಭಾಗವಾಗಿರುವ ಕೊಳೆಗೇರಿಯ ಶೇ 20 ಜನರನ್ನು 2015ರ ಜಾತಿಗಣತಿ ಆಧರಿಸಿ ಬಜೆಟ್ನಲ್ಲಿ ಹಣ ಮೀಸಲಿಡುವ ಪ್ರಸ್ತಾವವನ್ನು ಮುಖ್ಯಂತ್ರಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನ ರಾಜ್ಯ ಘಟಕದ ಸಂಚಾಲಕ ಎ. ನರಸಿಂಹ ಮೂರ್ತಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ ರಾಜ್ಯಕ್ಕೆ ಸಿಗುವ 1.5 ಲಕ್ಷ ಮನೆಗಳಿಗೆ ವಿನಾಯಿತಿ ಪಡೆದು ರಾಜ್ಯದ ಮುಖ್ಯಮಂತ್ರಿ ನಗರ ವಸತಿ ಯೋಜನೆಯಲ್ಲಿ ಘೋಸಿಸಬೇಕು ಎಂದರು. ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ, ಒಂದೇ ಸೂರಿನಡಿ ವಾಸಿಸುವ ಶೇ 51 ರಷ್ಟು ಸ್ಲಂ ನಿವಾಸಿಗಳನ್ನು ನಗರ ಪರಿಮಿತಿಯಲ್ಲಿರುವ ಶೇ 25 ರಷ್ಟು ಸರ್ಕಾರಿ ಭೂಮಿ ಮೀಸಲಿಡುವ ಕಾಯಿದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಲಂ ಜನಾಂದೋಲನ ಜಿಲ್ಲಾ ಘಟಕ ಅಧ್ಯಕ್ಷೆ ರೇಣುಕಾ ಸರಡಗಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸದಸ್ಯ ಮಾಪಣ್ಣ ಗಂಜಿಗೇರಿ, ಉಪನ್ಯಾಸಕಿ ನಂದಾ ರಾಜಗೋಪಾಲ ರೆಡ್ಡಿ, ನಿಲಕಂಠರಾವ ಮೂಲಗೆ, ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಸಂಚಾಲಕ ಗಣೇಶ ಕಾಂಬಳೆ ಇದ್ದರು.