ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ 5 ವರ್ಷ ಕಳೆದಿದ್ದು, ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಕಾಮಗಾರಿಯ ವ್ಯವಸ್ಥೆ ಪರಿಣಾಮ ಮಹಿಳೆಯರು, ವಿದ್ಯಾರ್ಥಿಗಳು, ವಾಹನ ಸವಾರರು ಪ್ರತಿದಿನ ನೋವು ಅನುಭವಿ ಸುವಂತಾಗಿದೆ. ಗುತ್ತಿಗೆ ಪಡೆದ ಕಂಪೆನಿಗೆ ನೀಡಿದ್ದ ನಿಗದಿತ ಗಡುವು ಪೂರ್ಣ ಗೊಂಡು ತಿಂಗಳುಗಳೇ ಉರುಳಿವೆ. ಆದರೆ, ಕಾಮಗಾರಿ ಮುಗಿಯುವ ಸೂಚನೆಯೇ ಕಂಡುಬಂದಿಲ್ಲ ಎನ್ನುವುದು ಜನರ ದೂರು.
ನಗರಸಭೆ ಅಧಿಕಾರಿಗಳ ಮಾಹಿತಿ ಪ್ರಕಾರ ಒಳಚರಂಡಿ ಕಾಮಗಾರಿಯು ಶೇ 85ರಷ್ಟು ಪೂರ್ಣಗೊಂಡಿದೆ. ಕೆಲವೆಡೆ ಪೈಪ್ಲೈನ್, ಮ್ಯಾನ್ಹೋಲ್ಗಳ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ, ಗುತ್ತಿಗೆ ಪಡೆದ ಕಂಪೆನಿಗೆ ಅವಧಿ ವಿಸ್ತರಿಸಿ ದರೂ ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು ಕ್ರಮವಹಿಸಿಲ್ಲ.
ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೆ ಜನರು ಸಂಕಷ್ಟ ಅನುಭವಿಸುವುದು ತಪ್ಪುತ್ತಿತ್ತು. ಇನ್ನೂ ರಸ್ತೆಯ ಮಧ್ಯಭಾಗದಲ್ಲಿಯೇ ಕೆಲವೆಡೆ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಇದಕ್ಕೆ ನಗರಸಭೆ ಕಚೇರಿ ಬಳಿ ನಡೆಯುತ್ತಿರುವ ಪೈಪ್ ಅಳವಡಿಕೆ ಕಾಮಗಾರಿಯೇ ಸಾಕ್ಷಿ. ಇಲ್ಲಿ ರಸ್ತೆ ಅಗೆದಿರುವುದರಿಂದ ಈ ಭಾಗದಲ್ಲಿ ವಾಹನಗಳು ಮತ್ತು ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕಾಮಗಾರಿ ಕೆಲಸವೂ ಮಂದಗತಿಯಲ್ಲಿ ಸಾಗಿದೆ.
‘2012ರಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರು ನಿತ್ಯವೂ ತೊಂದರೆ ಅನುಭಿಸುತ್ತಿದ್ದಾರೆ.ನಗರಸಭೆ ಆಡಳಿತ, ಜನಪ್ರತಿನಿಧಿ ಗಳಿಗೆ ನಾಗರಿಕರ ಸಂಕಷ್ಟ ಅರ್ಥ ವಾಗುತ್ತಿಲ್ಲ’ ಎಂದು ದೂರುತ್ತಾರೆ ದ್ವಿಚಕ್ರ ವಾಹನ ಸವಾರ ನಾಗೇಶ್.
‘ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿ ಯಾಗಿದ್ದು ಸಂಚರಿಸಲು ತೊಂದರೆ ಯಾಗಿದೆ. ಕೂಡಲೇ, ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆ ಕಂಪೆನಿಗೆ ಸೂಚಿಸ ಬೇಕು’ ಎನ್ನುವುದು ಅವರ ಒತ್ತಾಯ.