ಬಾಗಲಕೋಟೆ: ಶರಣ ಸಾಹಿತ್ಯ ಕೇವಲ ಲಿಂಗಾಯತರು ಇಲ್ಲವೇ ವೀರಶೈವರಿಗೆ ಸಂಬಂಧಿಸಿದ್ದು ಅಲ್ಲ. ಬದಲಿಗೆ ಇಡೀ ಮನುಕುಲಕ್ಕೆ ದಾರಿದೀಪವಾಗುವ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.
ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಯುವಜನ ಹಾಗೂ ಮಹಿಳಾ ಸಮಾವೇಶದಲ್ಲಿ ಕಿಣಗಿ ಬಸವಲಿಂಗಪ್ಪನವರು ಹಾಗೂ ಪಾರ್ವತಮ್ಮ ಅವರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಆಧುನಿಕ ಭೋಗ, ಭಾಗ್ಯ, ಮೋಹ, ಮಜಲಗಳಿಗೆ ಸಿಲುಕಿ ಇಂದಿನ ಯುವಜನಾಂಗ ದಿಕ್ಕು ತಪ್ಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹದಗೆಟ್ಟು ಹೋದ ಇಂದಿನ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳಲು ಯುವಜನತೆ ,ಮಹಿಳೆಯರಿಗೆ ವಚನ ಸಾಹಿತ್ಯದ ಮೂಲಕ ಶರಣರು ನೀಡಿದ ಸಂದೇಶ ಮಾರ್ಗದರ್ಶಿಯಾಗಲಿದೆ ಎಂದರು.
ನಿವೃತ್ತಿಯ ಬದುಕನ್ನು ಸಮುದಾಯದ ಏಳ್ಗೆಗೆ ವಿನಿಯೋಗಿಸುವಂತೆ ಹಿರಿಯರಿಗೆ ಕಿವಿಮಾತು ಹೇಳಿದ ಅವರು, ವೃದ್ಧ ತಾಯಿ–ತಂದೆಯನ್ನು ರಕ್ಷಣೆ ಮಾಡುವ ಮನೋಭಾವ ಇಂದಿನ ಯುವ ಮನಸ್ಸಿಗೆ ಬರುತ್ತಿಲ್ಲ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸಾದರ ಮಾತನಾಡಿ ವೈಚಾರಿಕ ಸಂದೇಶ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನುಡಿದಂತೆ ನಡೆಯುವುದೇ ನಿಜವಾದ ಸಾಹಿತ್ಯ. ಅದೇ ಕಾರಣಕ್ಕೆ ವಚನ ಸಾಹಿತ್ಯ 900 ವರ್ಷಗಳ ನಂತರವೂ ಇಂದಿಗೂ ಸಾರ್ವಕಾಲಿಕ ಸಾಹಿತ್ಯವಾಗಿ ಉಳಿದಿದೆ ಎಂದು ಹೇಳಿದ ಸಾದರ, ಬ್ರಿಟಿಷ್ ಪಾರ್ಲಿಮೆಂಟ್ನ ಎದುರು ಬಸವಣ್ಣನ ಪ್ರತಿಮೆ ಅನಾವರಣ ಮಾಡಿ ಜಗತ್ತಿಗೆ ಮೊದಲು ಸಂವಿಧಾನ, ಸಂಸತ್ ಕೊಟ್ಟು ದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೆದಿದ್ದನ್ನು ಸ್ಮರಿಸಲಾಯಿತು. ಇತಿಹಾಸ ಮರುಕಳಿಸಲಿದೆ ಎಂದು ಅಭಿಪ್ರಾಯಪಟ್ಟರು. ಮಾದಕ ವಸ್ತು ಸೇವಿಸುವುದಿಲ್ಲ. ತಂದೆ–ತಾಯಿಯನ್ನು ವೃದ್ಧಾಪ್ಯದಲ್ಲಿ ಜೋಪಾನ ಮಾಡುತ್ತೇವೆ ಎಂದು ಯುವಜನರಿಂದ ಇದೇ ವೇಳೆ ಪ್ರತಿಜ್ಞೆ ಮಾಡಿಸಲಾಯಿತು.
ಸಮಾರಂಭದಲ್ಲಿ ಚರಂತಿಮಠದ ಪ್ರಭುಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಹಾಜರಿದ್ದರು. ಮಧ್ಯಾಹ್ನ ನಡೆದ ಯುವಜನ ಗೋಷ್ಠಿಯಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.
ಸಂಕೇಶ್ವರದ ನಿವೃತ್ತ ಪ್ರಾಧ್ಯಾಪಕ ಡಾ.ಗುರುಪಾದ ಮರೇಗುದ್ದಿ ‘ವಚನ ಸಾಹಿತ್ಯ ಮತ್ತು ವರ್ತಮಾನದ ಯುವಜನತೆ’ ವಿಷಯದ ಬಗ್ಗೆ ಹಾಗೂ ಬಿ.ವಿ.ವಿ.ಎಸ್ ಪಾಲಿಟೆಕ್ನಿಕ್ನ ಪ್ರಾಚಾರ್ಯ ಪ್ರೊ.ಜಿ.ಬಿ.ದಾನಶೆಟ್ಟಿ ‘ತಂತ್ರಜ್ಞಾನ ಯುಗದಲ್ಲಿ ವಚನ ಸಾಹಿತ್ಯದ ಮೌಲ್ಯಗಳ ಸ್ಥಾನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮಹಿಳಾ ಗೋಷ್ಠಿಯ ಅಧ್ಯಕ್ಷತೆಯನ್ನು ಅಕ್ಕನಬಳಗದ ಅಧ್ಯಕ್ಷೆ ಶಾಂತಾತಾಯಿ ಶಾಬಾದಿ ವಹಿಸಿದ್ದರು.