ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದ ವಾಣಿ ಚಿತ್ರಮಂದಿರದಲ್ಲಿ ಆಯೋಜಿಸಿರುವ ‘ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳ ಉಚಿತ ಪ್ರದರ್ಶನ ಸಪ್ತಾಹ’ಕ್ಕೆ ಶುಕ್ರವಾರ ತಹಶೀಲ್ದಾರ್ ಮೋಹನ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಚಲನಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಒಲವು ಮೂಡಿಸಲು ಈ ಸಪ್ತಾಹ ಸಹಕಾರಿಯಾಗಲಿದೆ. ಕನ್ನಡ ಚಿತ್ರೋದ್ಯಮ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಸಪ್ತಾಹ ಯಶಸ್ವಿಗೊಳಿಸಬೇಕು’ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ಮಾತನಾಡಿ, ‘ಕನ್ನಡಿಗರ ಬದುಕು, ಭಾಷೆ ಹಾಗೂ ಚಿತ್ರರಂಗ ಉಳಿಸುವ ನಿಟ್ಟಿನಲ್ಲಿ ಈ ಸಪ್ತಾಹ ಆಯೋಜಿಸಲಾಗಿದೆ. ಉತ್ತಮ ಅಭಿರುಚಿಯ ಚಿತ್ರಗಳು ಯಾವಾಗಲೂ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ. ಹೀಗಾಗಿ ನಾಗರಿಕರು ಉಚಿತ ಪ್ರವೇಶ ಇರುವ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದರು.
ನಗರಸಭೆ ಆಯುಕ್ತ ಉಮಾಕಾಂತ್ ಮಾತನಾಡಿ, ‘ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ವಾರ್ತಾ ಇಲಾಖೆ ಉಚಿತವಾಗಿ ಜನರಿಗೆ ಪ್ರದರ್ಶಿ ಸುತ್ತಿರುವುದು ಪ್ರಶಂಸನೀಯ. ಕನ್ನಡ ಚಿತ್ರಗಳಿಂದ ವಿಮುಖರಾಗುತ್ತಿರುವ ಪ್ರೇಕ್ಷರನ್ನು ಪುನಃ ಚಿತ್ರಮಂದಿರಗಳತ್ತ ಸೆಳೆಯುವ ನಿಟ್ಟಿನಲ್ಲಿ ಇದೊಂದು ವಿನೂತನ ಪ್ರಯೋಗ’ ಎಂದು ಶ್ಲಾಘಿಸಿದರು.
ನಗರಸಭೆ ಸದಸ್ಯ ಶ್ರೀನಿವಾಸ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಸ್ವಾಮಿ, ವಾಣಿ ಚಿತ್ರಮಂದಿರದ ಮಾಲೀಕ ಎನ್.ಶ್ರೀನಿವಾಸ್, ಮ್ಯಾನೇಜರ್ ಆನಂದ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.